ಐದು ವರ್ಷದ ಕಾಡುಕೋಣ ಸಾಗರದ ಆವಿನಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದು ಈ ಭಾಗದಲ್ಲಿ ಸಂಚರಿಸುವ ಅಕ್ರಮ ಮರಳು ಸಾಗಾಟದ ವಿರುದ್ಧ ಪರಿಸರಾಸಕ್ತರು ಕಿಡಿಕಾರಿದ್ದಾರೆ. ಕೆಲ ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ.

ಈ ಕುರಿತು ಸಾಗರ ಡಿಎಫ್ ಓ ರಾಮಕೃಷ್ಣಪ್ಪ ಮಾತನಾಡಿ, ಕಾಡುಕೋಣ ಮೃತಪಟ್ಟ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದೆ. ಐದು ವರ್ಷ ಪ್ರಾಯದ ಕಾಟಿ ಭಾನುವಾರ ಬೆಳಗ್ಗೆ ಸುಮಾರು 4 ರಿಂದ 5 ಗಂಟೆ ಮಧ್ಯೆ ಅಸುನೀಗಿದೆ. ಆ ಭಾಗದಲ್ಲಿ ಓಡಾಡುವ ಲಾರಿಗಳು ಹಾಗೂ ಮರಳು ತುಂಬಿ ಸಾಗುವ ಟ್ರಕ್ ಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಅರಣ್ಯ ದಿನೇ ದಿನೇ ಸಂಕುಚಿತವಾಗುತ್ತಿದ್ದು, ವನ್ಯ ಮೃಗಗಳಿಗೆ ಮಾರಕವಾಗಿ ಪರಿಣಮಿಸಿದೆ. ಅಲ್ಲಲ್ಲಿ ಚದುರಿದಂತೆ ಇರುವ ಅರಣ್ಯದೊಳಗೆ ಏರು ಗತಿಯಲ್ಲಿ ಸಾಗಿರುವ ಕಾಡುಕೋಣ/ಕಾಡೆಮ್ಮೆ ಸಂತಾನಕ್ಕೆ ಅವಶ್ಯ ನೆಲೆ ಇಲ್ಲ. ಸಾಗರದ ಹೆದ್ದಾರಿಯಲ್ಲಿಯೂ, ಊರು-ಕೇರಿಗಳಲ್ಲೂ ರಾಜಾರೋಷವಾಗಿ ಓಡಾಡುತ್ತವೆ. ಕೆಲವೊಮ್ಮೆ ಹೊಲ-ಗದ್ದೆಗಳ ಬಳಿಯೂ ಗುಂಪಾಗಿ ಕಾಣುತ್ತವೆ. ಜನರ ಮೇಲೆ ದಂಡೆತ್ತಿ ಬಾರದ, ಸೂಕ್ಷ್ಮಮತಿಯೂ ಆಗಿರುವ ಕಾಡುಕೋಣಗಳಿಗೆ ನೆಲೆ ಇಲ್ಲದೇ ವಾಹನಗಳಿಗೆ ಬಲಿಯಾಗುತ್ತಿವೆ. ಶಿವಮೊಗ್ಗ ವನ್ಯಮೃಗಧಾಮದಲ್ಲೊಂದು ಸಣ್ಣ ಪಾರ್ಕ್ ಮಾಡಿದ್ದು ಬಿಟ್ಟರೆ ಇವುಗಳ ಬಗ್ಗೆ ಇಲಾಖೆಗೆ ಕಾಳಜಿಯೂ ಇಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಾಗರ ಮೂಲದ ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಹೀಗೆ ಬರೆದಿದ್ದಾರೆ,
‘ ದು:ಖದಿಂದಲೇ ಇದನ್ನು ಬರೆಯುತ್ತಿದ್ದೇನೆ.
ದಯವಿಟ್ಟು ಯಾರೂ ಲೈಕ್ ಮಾಡಬೇಡಿ.
ಸಮಸ್ಯೆ ಬಗೆಹರಿಸಲು ಸಲಹೆ ನೀಡಬಹುದು.
ವಿರಳವಾಗಿ ಫಸಲು ಬಂದ ಗೇರು ಬೀಜಗಳನ್ನು ಕೊಯ್ಯಲು ಬ್ಯಾಣಕ್ಕೆ ಹೋಗಿದ್ದೆ. ಹವಾಮಾನ ವೈಪರೀತ್ಯದ ಕಾರಣಕ್ಕೆ ನಿರೀಕ್ಷಿತ ಫಸಲು ಬರುತ್ತಿಲ್ಲ. ಬೆಟ್ಟ ಹತ್ತಿ ಬಂದ ಅಶ್ವಿನಿ ಏದುಸಿರು ಬಿಡುತ್ತಾ ಜಯಪ್ರಕಾಶ ಫೋನ್ ಮಾಡಿದ್ದರು, ಸಿಗಂದೂರು ರಸ್ತೆಯಲ್ಲಿ ಕಾಡುಕೋಣ ಸತ್ತಿದೆಯಂತೆ, ಬರಬೇಕಂತೆ ಎಂದಳು. ಕೆಲಸವನ್ನು ಅರ್ಧಕ್ಕೆ ಬಿಟ್ಟು ಓಡಿದೆ. ಬೆಳಗಿನ ಜಾವದ ಅಕ್ರಮ ಮರಳು ಲಾರಿಗೆ ಸಿಕ್ಕು ಈ ಬಲಭೀಮ ಧರಾಶಾಯಿಯಾಗಿದ್ದ. ಎರಡು ತಿಂಗಳ ಅವಧಿಯಲ್ಲಿ ಇದು ಎರಡನೇ ಘಟನೆ. ಈ ಹಿಂದೆ ಇದೇ ದಾರಿಯಲ್ಲಿ ಮೂರು ವರ್ಷದ ಕಾಟಿಯ ಮರಿಯೊಂದು ವೇಗದ ಮರಳು ಲಾರಿಗೆ ಸಿಕ್ಕಿ ಸತ್ತಿತ್ತು. ಇದಿಷ್ಟು ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ‘
ಇನ್ನು ಇನ್ನೊಬ್ಬ ಪರಿಸರಾಸಕ್ತ ಸಹದೇವ್ ಪ್ರತಿಕ್ರಿಯೆ ನೀಡಿ,
‘ದಿನಕ್ಕೆ ಕೇವಲ 500 ವಾಹನಗಳು ಓಡಾಡುವ ಸಾಗರ -ಸಿಗಂದೂರು ಹಳ್ಳಿಯ ರಸ್ತೆಯನ್ನು ರಾಷ್ಟ್ರಯ ಹೆದ್ದಾರಿ (NH369E) ಅಂತ ಮೇಲ್ದರ್ಜೆಗೆ ಏರಿಸಿದ್ದಾರೆ.ರಸ್ತೆ ಅಗಲ ಮಾಡುವ ಮುಂಚೆನೇ ವಾಹನಕ್ಕೆ ಸಿಕ್ಕಿ ವನ್ಯ ಪ್ರಾಣಿಗಳು ಸಾಯುತ್ತಿವೆ.ಒಂದೇ ವರ್ಷದಲ್ಲಿ ಇದು ಎರಡನೆಯ ಘಟನೆ’