ಬೆಂಗಳೂರು: ಕರ್ನಾಟಕದ ವನ್ಯಜೀವಿ ಸಂರಕ್ಷಣೆ ಮತ್ತು ಮೃಗಾಲಯಗಳ ನಿರ್ವಹಣೆಗೆ ಶತಮಾನಗಳ ಇತಿಹಾಸವಿದೆ. 1909ರಲ್ಲಿ ಮೈಸೂರು ಮಹಾರಾಜರು ಸ್ಥಾಪಿಸಿದ ಮೈಸೂರು ಮೃಗಾಲಯದಿಂದ ಹಿಡಿದು ಇಂದಿನ ಬನ್ನೇರುಘಟ್ಟದವರೆಗೆ, ರಾಜ್ಯವು ಪ್ರಾಣಿಗಳ ಆರೈಕೆಯಲ್ಲಿ ದೇಶಕ್ಕೇ ಮಾದರಿಯಾಗಿದೆ.
ಆದರೆ, ಇತ್ತೀಚೆಗೆ ರಾಜ್ಯದ ಪಶುವೈದ್ಯರು ಮತ್ತು ಅರಣ್ಯ ಅಧಿಕಾರಿಗಳು ಗುಜರಾತ್ನ ಜಾಮ್ನಗರದಲ್ಲಿರುವ ‘ವನ್ ತಾರಾ’ (Vantara) ಎಂಬ ಖಾಸಗಿ ವನ್ಯಜೀವಿ ಕೇಂದ್ರಕ್ಕೆ ಸಚಿವರ ಅನುಮತಿ ಇಲ್ಲದೆ ಭೇಟಿ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಲಾಖೆಯ ಶಿಸ್ತು ಕಾಪಾಡಲು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ವೈದ್ಯೆ ಸಮೀಕ್ಷಾ ರೆಡ್ಡಿ ಅಗಲಿಕೆ ಬೆನ್ನಲ್ಲೇ ಸುಧಾರಣಾ ಕ್ರಮವಾಗಿ ದೇಶದಲ್ಲೇ ಮೊದಲ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಖಾಸಗಿ ಸಂಸ್ಥೆ ಸುಳಿಯಲ್ಲಿ ದಕ್ಷಿಣದ ರಾಜ್ಯಗಳೂ ಸಹ ಸಿಲುಕುತ್ತಿದ್ದು ರಾಜ್ಯದ ಸ್ವಂತ ಪರಂಪರೆ ಉಳಿಸಲು ಈ ಆದೇಶ ದಿಕ್ಸೂಚಿಯಾಗಿದೆ.
ಏನಿದೆ ಟಿಪ್ಪಣಿಯಲ್ಲಿ
ದಿನಾಂಕ: 23.03.2026
ಟಿಪ್ಪಣಿ
ಮೃಗಾಲಯಗಳಲ್ಲಿನ ವನ್ಯಜೀವಿಗಳ ಸಮರ್ಥ ನಿರ್ವಹಣೆ, ಜನರಿಗೆ ಉಪಟಳ ನೀಡುವ ವನ್ಯಜೀವಿಗಳ ಸೆರೆ ಮತ್ತು ಸ್ಥಳಾಂತರ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಗಾಯಗೊಂಡ ವನ್ಯಜೀವಿಗಳನ್ನು ಆರೈಕೆ ಮಾಡುವ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ನೂರು ವರ್ಷಗಳ ಹಿಂದೆ ಅಂದರೆ 1909ರಲ್ಲಿಯೇ ಅಂದಿನ ಮೈಸೂರು ಮಹಾರಾಜರು ಶ್ರೀ ಚಾಮರಾಜೇಂದ್ರ ಪ್ರಾಣಿಶಾಸ್ತ್ರದ ಉದ್ಯಾನ ಆರಂಭಿಸಿದರು. ನಂತರ ಅದು ಮೈಸೂರು ಮೃಗಾಲಯ ಎಂದೇ ಖ್ಯಾತವಾಗಿದೆ. ಇದಲ್ಲದೆ ಬೆಂಗಳೂರು ಸಮೀಪದ ಬನ್ನೇರುಘಟ್ಟದಲ್ಲಿ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಗದಗ ಸೇರಿದಂತೆ ಹಲವು ಕಡೆಗಳಲ್ಲಿ ಮೃಗಾಲಯಗಳಿದ್ದು, ಅಲ್ಲಿ ವನ್ಯಜೀವಿ ಮತ್ತು ಪಕ್ಷಿಗಳನ್ನು ಉತ್ತಮವಾಗಿ ನೋಡಿಕೊಳ್ಳಲಾಗುತ್ತಿದೆ.
ಇಂತಹ ಭವ್ಯ ಪರಂಪರೆ ಇರುವ ರಾಜ್ಯದ ಮೃಗಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಶುವೈದ್ಯರು, ಕೆಲವು ಅರಣ್ಯ ಅಧಿಕಾರಿಗಳು, ಮೃಗಾಲಯಗಳ ನಿರ್ದೇಶಕರುಗಳು ಗುಜರಾತಿನ ಜಾಮ್ ನಗರದಲ್ಲಿರುವ ವನ್ ತಾರಾ ಎಂಬ ಖಾಸಗಿ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಉಳಿಯುತ್ತಿರುವ ಹಾಗೂ ಅಲ್ಲಿನ ಸಂಶೋಧಕರು ಮತ್ತು ವೈದ್ಯರೊಂದಿಗೆ ಸತತ ಸಂಪರ್ಕದಲ್ಲಿರುವ ಬಗ್ಗೆ ಕಚೇರಿಗೆ ಮಾಹಿತಿ ಬಂದಿದೆ.
ಈವರೆಗೆ ಅರಣ್ಯ ಇಲಾಖೆಯ ಯಾವ ಯಾವ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯಲ್ಲಿ ನಿಯೋಜನೆಯ ಮೇಲೆ, ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಯಾವ ಯಾವ ಪಶು ವೈದ್ಯರು ವನ್ ತಾರಾಗೆ ಹೋಗಿ ಬಂದಿದ್ದಾರೆ, ಅವರಿಗೆ ಅಲ್ಲಿಗೆ ಹೋಗಲು ಅನುಮತಿ ನೀಡಿದವರು ಯಾರು, ಯಾವ ಕಾರಣಕ್ಕೆ ಹೋಗಿದ್ದರು ಎಂಬ ಬಗ್ಗೆ ವಿವರವನ್ನು 7 ದಿನಗಳ ಒಳಗಾಗಿ ಕಡತದಲ್ಲಿ ಈ ಕಚೇರಿಗೆ ಸಲ್ಲಿಸಲು ಮತ್ತು ಇನ್ನು ಮುಂದೆ ಯಾರೇ ಖಾಸಗಿ ಮೃಗಾಲಯಗಳಿಗೆ ಅಥವಾ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಹೋಗುವ ಮೊದಲು ಅರಣ್ಯ ಸಚಿವರ ಅನುಮತಿ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಲು ಸೂಚಿಸಿದೆ.








