Ode to the west wind

Join Us on WhatsApp

Connect Here

ಪ್ರತಿಷ್ಠಿತ ಕಂಪನಿಗಳಿಂದ 2000 ಕೋಟಿ ರೂ. ಬಾಕಿ: ಹಣ ವಸೂಲಿಗೆ ತಂಡ, ಕಾನೂನು ಕೋಶ: ಈಶ್ವರ ಖಂಡ್ರೆ

WhatsApp
Facebook
Twitter
LinkedIn

ರಾಜ್ಯದ ಕೊಡಗು, ಚಾಮರಾಜನಗರ ಮತ್ತಿತರ ಜಿಲ್ಲೆಗಳಲ್ಲಿ ಅರಣ್ಯ ಭೂಮಿಯನ್ನು ಸ್ವಾತಂತ್ರ್ಯಪೂರ್ವದಿಂದಲೂ ಗುತ್ತಿಗೆಗೆ ಪಡೆದು ಕಾಫಿ, ಟೀ, ರಬ್ಬರ್ ಬೆಳೆಯುತ್ತಿರುವ ಪ್ರತಿಷ್ಠಿತ ಕಂಪನಿಗಳಿಂದ ಸುಮಾರು 2 ಸಾವಿರ ಕೋಟಿ ರೂ. ಗುತ್ತಿಗೆ ಹಣ ಮತ್ತು ಬಡ್ಡಿ ಬಾಕಿ ಬರಬೇಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಒಳಹೊರಗನ್ನು ತಿಳಿಯಲು ಅಧ್ಯಯನ ಮಾಡಲು ಆರಂಭಿಸಿದಾಗ 2 ಸಾವಿರ ಕೋಟಿ ರೂ. ಬಾಕಿ ಇರುವುದು ಗಮನಕ್ಕೆ ಬಂದಿದ್ದು, ಇದರ ವಸೂಲಿಗೆ ಪ್ರಸ್ತುತ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ಪಿ.ರವಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಈ ಸಂಬಂಧ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕಾನೂನು ಹೋರಾಟ ನಡೆಸಲು ವಿಶೇಷ ಕಾನೂನು ಕೋಶ ರಚಿಸಲಾಗುವುದು ಎಂದು ತಿಳಿಸಿದರು.

ನಮ್ಮ ರಾಜ್ಯದ ವನ ಪ್ರದೇಶದಲ್ಲಿ ಸುಮಾರು 5500 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಎಕರೆಗೆ 2 ರೂ. 7. ರೂ.ನಂತೆ ಬ್ರಿಟಿಷರ ಆಡಳಿತ ಕಾಲದಲ್ಲಿ ವಿವಿಧ ಕಂಪನಿಗಳಿಗೆ ಮತ್ತು ವ್ಯಕ್ತಿಗಳಿಗೆ 99 ವರ್ಷ ದೀರ್ಘಾವಧಿ ಗುತ್ತಿಗೆ ನೀಡಲಾಗಿತ್ತು. ಕೆಲವು ಗುತ್ತಿಗೆಯನ್ನು ಸ್ವಾತಂತ್ರ್ಯಾನಂತರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಮುನ್ನ ನವೀಕರಿಸಲಾಗಿದೆ ಎಂದರು.

1997ರಲ್ಲಿ ಗುತ್ತಿಗೆ ದರವನ್ನು ಹೆಕ್ಟೇರ್ ಗೆ 5 ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈ ಹೆಚ್ಚಳವನ್ನು ಪ್ರಶ್ನಿಸಿ ಮತ್ತು ಬಡ್ಡಿ ಹಣ ನೀಡುವ ವಿಚಾರದಲ್ಲಿ ಕಂಪನಿಗಳು ನ್ಯಾಯಾಲಯಕ್ಕೆ ಹೋಗಿವೆ. ದಶಕಗಳಿಂದ ಈ ಕಂಪನಿಗಳು ಗುತ್ತಿಗೆ ಹಣ ಪಾವತಿಸಿಲ್ಲ ಎಂದು ತಿಳಿಸಿದರು.

ಲಭ್ಯ ಮಾಹಿತಿಯ ಪ್ರಕಾರ, ವೀರಾಜಪೇಟೆಯ ಮರ್ಕೆರಾ ರಬ್ಬರ್ ಲಿಮಿಟೆಡ್ 1074 ಎಕರೆ ಭೂಮಿ ಗುತ್ತಿಗೆ ಪಡೆದಿದ್ದು  2015ರ ಮಾರ್ಚ್ ವರೆಗೆ  ಬಡ್ಡಿ ಸಹಿತ 454 ಕೋಟಿ ರೂಪಾಯಿ ಪಾವತಿಸಬೇಕಿದ್ದರೆ, ಥಾಮ್ಸನ್ ರಬ್ಬರ್ ಇಂಡಿಯಾ ಲಿಮಿಟೆಡ್ 625 ಎಕರೆ ಗುತ್ತಿಗೆ ಪಡೆದಿದ್ದು  91 ಕೋಟಿ 29 ಲಕ್ಷ ರೂಪಾಯಿ ಪಾವತಿಸಬೇಕಿದೆ, ನಿಲಂಬೂರು ರಬ್ಬರ್ ಕಂಪನಿ ಲಿಮಿಟೆಡ್  713 ಎಕರೆ ಗುತ್ತಿಗೆ ಪಡೆದಿದ್ದು 130 ಕೋಟಿ 22 ಲಕ್ಷ ರೂಪಾಯಿ ಪಾವತಿಸಬೇಕು ಹಾಗೂ ಪೋರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್ ಲಿಮಿಟೆಡ್ 1288 ಎಕರೆ  ಗುತ್ತಿಗೆ ಪಡೆದಿದ್ದು 2022 ರವರೆಗೆ 536 ಕೋಟಿ 66 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದೆ ಎಂದು ವಿವರಿಸಿದರು.
ಇದರ ಜೊತೆಗೆ ಗ್ಲೆನ್ ಲಾರೆನ್ ಪ್ಲಾಂಟೇಷನ್ ಪ್ರೈ ಮತ್ತು ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆ ಸೇರಿ 943 ಎಕರೆ ಅರಣ್ಯ ಭೂಮಿ ಗುತ್ತಿಗೆ ಪಡೆದಿದ್ದು ಗುತ್ತಿಗೆ ಹಣ, ಬಡ್ಡಿ ಮತ್ತು ದಂಡ ಮೊತ್ತ ಸೇರಿ 524  ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿದೆ. ಚಾಮರಾಜನಗರದ ಹೊನ್ನಮಟ್ಟಿ ನೀಲಗಿರಿ ಪ್ಲಾಂಟೇಷನ್ ಲಿಮಿಟೆಡ್ ಮತ್ತಿತರರಿಂದ 2015ರವರೆಗೆ 25 ಕೋಟಿ ರೂಪಾಯಿ 36 ಲಕ್ಷ ರೂಪಾಯಿ ಬರಬೇಕಿದೆ. ಈ ಎಲ್ಲ ಕಂಪನಿಗಳು ಪಾವತಿಸಬೇಕಿರುವ ಗುತ್ತಿಗೆಹಣ, ಬಡ್ಡಿ, ಚಕ್ರಬಡ್ಡಿ, ದಂಡ ಮೊತ್ತ ಸೇರಿದರೆ ಒಟ್ಟು 2000  ಕೋಟಿ ರೂಪಾಯಿಗೂ ಹೆಚ್ಚು ಹಣ ಅರಣ್ಯ ಇಲಾಖೆಗೆ ಬರಬೇಕು. ಕೊಡಗು ಜಿಲ್ಲೆಯೊಂದರಲ್ಲೇ ಇಲಾಖೆಗೆ ಗುತ್ತಿಗೆ ಮೊತ್ತ 1601 ಕೋಟಿ ರೂಪಾಯಿ ಬರಬೇಕು ಎಂದು ಆಡಿಟ್ ವರದಿ ತಿಳಿಸಿದೆ ಎಂಬ ಅಂಕಿ ಅಂಶ ನೀಡಿದರು.
ಇದರಲ್ಲಿ ಥಾಮ್ಸನ್ ರಬ್ಬರ್ ಅರಣ್ಯ ಗುತ್ತಿಗೆ ಭೂಮಿಯನ್ನೇ ಸಾಗು ಜಮೀನು ಎಂದು ಬ್ಯಾಂಕ್ ನಲ್ಲಿ ಅಡಮಾನ ಇಟ್ಟು ಸಾಲ ಪಡೆದಿದ್ದು, ಸಾಲ ಕಟ್ಟದ ಕಾರಣ ಬ್ಯಾಂಕ್ ನವರು ಅದನ್ನು ಹರಾಜು ಹಾಕಿದ್ದಾರೆ ಎಂಬ ಅಂಶವೂ ಬೆಳೆಕಿಗೆ ಬಂದಿದೆ ಎಂದರು.
ಗುತ್ತಿಗೆ ಅವಧಿ ಮುಗಿದ ಅರಣ್ಯಭೂಮಿ ಹಿಂಪಡೆಯಲು ಮತ್ತು ಕಂಪನಿಗಳಿಂದ ಬರಬೇಕಾದ ಬಾಕಿ ವಸೂಲಿ ಮಾಡಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.

ಅಘೋಷಿತ ವನ್ಯಜೀವಿ ಅಂಗಾಂಗ ಮರಳಿಸಲು ಜ.16ರಿಂದ 3 ತಿಂಗಳ ಕಾಲಾವಕಾಶ:

ಹುಲಿ, ಚಿರತೆ ಉಗುರು, ಜಿಂಕೆ ಕೊಂಬು, ಆನೆ ದಂತ, ಕೂದಲು ಇತ್ಯಾದಿ ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುವುದು, ವನ್ಯಜೀವಿ ಮಾಂಸ ಭಕ್ಷಣೆ ಅಪರಾಧವಾಗಿದ್ದು, 1978ರಲ್ಲಿ ಮತ್ತು 2003ರಲ್ಲಿ ಈ ವಸ್ತುಗಳಿದ್ದರೆ ಘೋಷಣೆ ಮಾಡಿ ಹಕ್ಕು ಪ್ರಮಾಣ ಪತ್ರ ಪಡೆಯಲು ಅವಕಾಶ ನೀಡಲಾಗಿತ್ತು. ಆಗ ಘೋಷಣೆ ಮಾಡಿಕೊಳ್ಳದೆ ಕೆಲವರು ವಿವಿಧ ವನ್ಯಜೀವಿ ಅಂಗಾಂಗದ ಟ್ರೋಫಿ, ಕೊಂಬು ಇತ್ಯಾದಿ ಹೊಂದಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಕಾಯಿದೆಯ ಅರಿವಿಲ್ಲದೆ ಮುಗ್ಧ ಜನರು ಸಂಕಷ್ಟಕ್ಕೆ ಸಿಲುಕಬಾರದು ಎಂದು ಈಗ ಒಂದು ಬಾರಿಯ ಅವಕಾಶ ನೀಡಲು ತೀರ್ಮಾನಿಸಲಾಗಿದ್ದು, ಇವುಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ ಕಲ್ಪಿಸಲಾಗಿದೆ. ಜ.16ರಿಂದ 3 ತಿಂಗಳುಗಳ ಕಾಲ ಈ ವಸ್ತುಗಳನ್ನು ಹತ್ತಿರದ ಅರಣ್ಯ ಇಲಾಖೆಯ ಕಚೇರಿಗೆ ಮರಳಿಸಬಹುದು ಮತ್ತು ಮರಳಿಸಿದಾಗ ಅವರಿಗೆ ಸ್ವೀಕೃತಿ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರ ನೀಡಿರುವ ಗಡುವಿನ ನಂತರ ಯಾರೇ ಇಂತಹ ವನ್ಯಜೀವಿ ಅಂಗಾಂಗದ ಆಭರಣ ಧರಿಸಿದರೆ, ಮನೆಗಳಲ್ಲಿ ಅಘೋಷಿತ ಟ್ರೋಫಿ, ಇತ್ಯಾದಿ ಹೊಂದಿದ್ದರೆ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಹೀಗಾಗಿ ಎಲ್ಲರೂ ಒಂದು ಬಾರಿಯ ಅವಕಾಶ ಬಳಸಿಕೊಳ್ಳುವಂತೆ ಮನವಿ ಮಾಡಿದರು.
ತನಿಖೆಗೆ ಸಿದ್ಧ ಎಂದು ಖಂಡ್ರೆ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅರಣ್ಯ ಇಲಾಖೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ನಾನು ಯಾರಿಗೂ ಸವಾಲು ಹಾಕಲು ಬಯಸುವುದಿಲ್ಲ. ಆದರೆ ನನ್ನ ಇಲಾಖೆ ಪಾರದರ್ಶಕವಾಗಿರಬೇಕು ಎಂದು ಬಯಸುತ್ತೇನೆ. ಅವರು ಸ್ಪಷ್ಟ ದಾಖಲೆ ಒದಗಿಸಿದರೆ ಖಂಡಿತಾ ತನಿಖೆಗೆ ಆದೇಶ ನೀಡಲಾಗುವುದು, ಕ್ರಮ ಜರುಗಿಸಲಾಗುವುದು ಎಂದರು.

ನಾನು ಸಚಿವನಾಗಿ ಬಂದ ಕೂಡಲೇ 6 ಮರ ಕಡಿತಲೆಗೆ ಅನುಮತಿ ಕೇಳಿದರೆ 66 ಮರ ಕಡಿಯಲು ಅನುಮತಿ ನೀಡಿದ ಡಿ.ಸಿಎಫ್. ಚಕ್ರಪಾಣಿ ಅವರನ್ನು ಅಮಾನತು ಮಾಡಿರುತ್ತೇನೆ. ಇನ್ನು ಪರಿಭಾವಿತ ಅರಣ್ಯ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿಗೆ ಶಿಫಾರಸು ಮಾಡಿದ್ದ ಹಾಸನದ ಡಿ.ಸಿ.ಎಫ್. ಹರೀಶ್ ಅವರನ್ನು ಅಮಾನತು ಮಾಡಿದ್ದೆ.
ಇದಾದ ಬಳಿಕ ಬೆಂಗಳೂರು ನಗರದ ಕೊತ್ತನೂರು ಬಳಿ ಸುಮಾರು 500ಕೋಟಿ ಬೆಲೆ ಬಾಳುವ ಅರಣ್ಯ ಜಮೀನನ್ನು ಕಂದಾಯ ಭೂಮಿ ಎಂದು ಪರಿವರ್ತನೆ ಮಾಡಿದ್ದ ಉಪ ವಿಭಾಗಾಧಿಕಾರಿ ಶಿವಣ್ಣ ಮತ್ತು ತಹಶೀಲ್ದಾರ್ ಅಜಿತ್ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನೇ ದಾಖಲಿಸಲಾಗಿದೆ. ಈಗ ಹಾಸನದಲ್ಲಿ 66 ಎಕರೆ ಅರಣ್ಯವನ್ನು ಕಂದಾಯ ಜಮೀನು ಎಂದು ಮಂಜೂರು ಮಾಡಿರುವ ಎ.ಸಿ. ಜಗದೀಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚನೆ ನೀಡಿದ್ದೇನೆ ಎಂದರು.

ಕಡೂರು ತಹಶೀಲ್ದಾರ್ ಆಗಿದ್ದ ಉಮೇಶ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಅರಣ್ಯ ಭೂಮಿ ಮಂಜೂರು ಮಾಡಿದ್ದರು ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಹಾಸನ ವಲಯದ ಯಸಳೂರು ವಲಯದಲ್ಲಿ ಅಕ್ರಮ ಮರಗಳ ಕಡಿತಲೆ ಪ್ರಕರಣದಲ್ಲಿ ಆರ್.ಎಫ್.ಓ. ಜಗದೀಶ್ ರನ್ನು ಅಮಾನತು ಮಾಡಲಾಗಿದೆ. ನಂದಗೊಂಡನಹಳ್ಳಿ 126 ಮರಗಳ ಅಕ್ರಮ ಕಡಿತಲೆ ಪ್ರಕರಣದಲ್ಲೂ 5 ಜನರ ಅಮಾನತಾಗಿದೆ. ಯಾವುದೇ ಇಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದರೂ ನಾನು ಕ್ರಮ ಕೈಗೊಳ್ಳುತ್ತಿದ್ದೇನೆ. ತನಿಖೆ ಮಾಡಿಸುತ್ತಿದ್ದೇನೆ ಎಂದು ವಿವರಿಸಿದರು.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಸ್ತಾಪಿತ, ಭದ್ರಾ ವನ್ಯಜೀವಿ ವ್ಯಾಪ್ತಿಯ ತಣಿಗೆಬೈಲು  ಗುಡ್ಡದಬೀರನಹಳ್ಳಿ ಗುರುಪುರ ರಾಜ್ಯ ಅರಣ್ಯದ ಮನ್ನಾ ಜಂಗಲಿ ಅರಣ್ಯ ಪ್ರದೇಶದ ಬಫರ್ ಅರಣ್ಯದಲ್ಲಿ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದ ಪ್ರಕರಣದಲ್ಲಿ ಈಗಾಗಲೇ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಬಿ.ಎಂ. ಮತ್ತು ಇತರ ಇಬ್ಬರು ಸಿಬ್ಬಂದಿಯ ಅಮಾನತು ಮಾಡಲಾಗಿದೆ ಎಂದರು.
ಕುಮಾರಸ್ವಾಮಿ ವಿರಾಜಪೇಟೆಯಲ್ಲಿನ ಪ್ರಕರಣ ಪ್ರಸ್ತಾಪಿಸಿದ್ದಾರೆ.  ಐ.ಎಫ್.ಎಸ್. ಅಧಿಕಾರಿ ಚಕ್ರಪಾಣಿ ಮತ್ತು ಇತರರನ್ನು ಅಮಾನತು ಮಾಡಲಾಗಿದೆ. ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆದಿದ್ದಾರೆ. ಈ ಸಂಬಂಧ ಇಲಾಖೆ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ವರದಿ ಇನ್ನೂ ಸಚಿವಾಲಯಕ್ಕೆ ಬಂದಿಲ್ಲ. ಬಂದ ಕೂಡಲೇ ಕ್ರಮ ಜರುಗಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ  ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ಉಪಸ್ಥಿತರಿದ್ದರು.

ಬಾಕಿ ಉಳಿಸಿಕೊಂಡ ಕಂಪನಿಗಳು

ವಿರಾಜಪೇಟೆಯ  –
• ಮರ್ಕೆರಾ ರಬ್ಬರ್ ಲಿ 1074 ಎಕರೆ ಭೂಮಿ ಗುತ್ತಿಗೆ ಪಡೆದಿದ್ದು  ಬಡ್ಡಿ ಸಹಿತ 454 ಕೋಟಿ ರೂಪಾಯಿ  ಪಾವತಿಸಬೇಕಿದೆ.
• ಥಾಮ್ಸನ್ ರಬ್ಬರ್ ಇಂಡಿಯಾ ಲಿಮಿಟೆಡ್ 625 ಎಕರೆ ಗುತ್ತಿಗೆ ಪಡೆದಿದ್ದು 2015ರವರೆಗೆ 91 ಕೋಟಿ 29ಲಕ್ಷ ರೂಪಾಯಿ ಪಾವತಿಸಬೇಕಿದೆ.
• ನಿಲಂಬೂರು ರಬ್ಬರ್ ಕಂಪನಿ ಲಿಮಿಟೆಡ್  713 ಎಕರೆ ಗುತ್ತಿಗೆ ಪಡೆದಿದ್ದು 130 ಕೋಟಿ 22 ಲಕ್ಷ ರೂಪಾಯಿ ಪಾವತಿಸಬೇಕಿದೆ.
• ಪೋರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್ ಲಿಮಿಟೆಡ್ 1288 ಎಕರೆ  ಗುತ್ತಿಗೆ ಪಡೆದಿದ್ದು 2022ರವರೆಗೆ 536 ಕೋಟಿ 66 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದೆ.
• ಗ್ಲೆನ್ ಲಾರೆನ್ ಪ್ಲಾಂಟೇಷನ್ ಪ್ರೈ ಮತ್ತು ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆ ಸೇರಿ 943 ಎಕರೆ ಅರಣ್ಯ ಭೂಮಿ ಗುತ್ತಿಗೆ ಪಡೆದಿದ್ದು  524  ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿದೆ.
• ಚಾಮರಾಜನಗರದ ಹೊನ್ನಮಟ್ಟಿ ನೀಲಗಿರಿ ಪ್ಲಾಂಟೇಷನ್ ಲಿಮಿಟೆಡ್ ಮತ್ತಿತರರಿಂದ 2015ರವರೆಗೆ 25 ಕೋಟಿ ರೂಪಾಯಿ 36 ಲಕ್ಷ ರೂಪಾಯಿ ಬರಬೇಕಿದೆ. ಇದಕ್ಕೆ ಬಡ್ಡಿ, ಚಕ್ರಬಡ್ಡಿ, ದಂಡ ಮೊತ್ತ ಸೇರಿದರೆ ಒಟ್ಟು 2000  ಕೋಟಿ ರೂಪಾಯಿಗೂ ಹೆಚ್ಚು ಹಣ ಅರಣ್ಯ ಇಲಾಖೆಗೆ ಬರಬೇಕು.
• ಇದರಲ್ಲಿ ಥಾಮ್ಸನ್ ರಬ್ಬರ್ ಅರಣ್ಯ ಗುತ್ತಿಗೆ ಭೂಮಿಯನ್ನೇ ಬ್ಯಾಂಕ್ ನಲ್ಲಿ ಅಡಮಾನ ಇಟ್ಟು ಸಾಲ ಪಡೆದಿದ್ದು, ಸಾಲ ಕಟ್ಟದ ಕಾರಣ ಬ್ಯಾಂಕ್ ನವರು ಅದನ್ನು ಹರಾಜು ಹಾಕಿದ್ದಾರೆ.
• ಇದರ ಜೊತೆಗೆ ವಿರಾಜಪೇಟೆ ಒಂದರಿಂದಲೇ ಸಂಬಂಧಿಸಿದಂತೆ ಆಡಿಟ್ ವ ವರದಿಯಲ್ಲಿ ಇಲಾಖೆಗೆ ಗುತ್ತಿಗೆ ಮೊತ್ತ 1601 ಕೋಟಿ ರೂಪಾಯಿ ಬರಬೇಕು.

You Might Also Like This