ಮಲೆನಾಡಿನ ಭೂ ಹಕ್ಕು ಹೋರಾಟ, ಕಿಚ್ಚು ಪಡೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಡನಾಡಿಗಳು ಹಾಗೂ ಹಿರಿಯ ಸಮಾಜವಾದಿ ನಾಯಕ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಕುಟುಂಬವೇ ಈಗ ತಮ್ಮ ಪೂರ್ವಜರ ಆಸ್ತಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡರ ಜೊತೆಗೂಡಿ ‘ಉಳುವವನೇ ಹೊಲದೊಡೆಯ’ ಚಳವಳಿಯನ್ನು ಮುನ್ನಡೆಸಿದ್ದ ಲಿಂಗಪ್ಪನವರ ಸ್ವಂತ ಕುಟುಂಬದ ಸಾಗುವಳಿ ಭೂಮಿಯೇ ಈಗ ಅರಣ್ಯ ಇಲಾಖೆ ವಶಕ್ಕೆ ಪಡೆಯುತ್ತಿರುವುದು ವಿಪರ್ಯಾಸದ ಸಂಗತಿ.
ತೀರ್ಥಹಳ್ಳಿ ತಾಲೂಕಿನ ಮೇಲಿನಕಡಗೋಡು ಗ್ರಾಮದ ಸರ್ವೆ ನಂಬರ್ 48 ಮತ್ತು 51ರಲ್ಲಿ ಈ ಘಟನೆ ನಡೆದಿದೆ. ಸುಮಾರು 90 ವರ್ಷಗಳಿಂದ ಲಿಂಗಪ್ಪನವರ ಕುಟುಂಬದ ವಶದಲ್ಲಿದ್ದ ಜಮೀನನ್ನು ಅರಸಾಳು ವಲಯದ ಅರಣ್ಯ ಅಧಿಕಾರಿಗಳು ಜೆಸಿಬಿ ಮೂಲಕ ಕಂದಕ ತೋಡಿ ವಶಕ್ಕೆ ಪಡೆದಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಅಡಿಕೆ ತೋಟದ ನಡುವೆ ಗಡಿ ಕಂದಕ ನಿರ್ಮಿಸಿರುವುದು ಕುಟುಂಬದ ಜೀವನೋಪಾಯಕ್ಕೆ ಸಂಚಕಾರ ತಂದಿದೆ. 1964ರಲ್ಲಿ ಶಾಂತವೇರಿ ಗೋಪಾಲಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಲಿಂಗಪ್ಪನವರ ತಾಯಿ ಗೌರಮ್ಮನವರ ಹೆಸರಿಗೆ ಮಂಜೂರಾಗಿದ್ದ ಈ ಜಮೀನು, ದಶಕಗಳ ಕಾಲ ‘ಪಟ್ಟಾ’ ಹೊಂದಿದ್ದರೂ ಈಗ ಅರಣ್ಯ ಒತ್ತುವರಿ ಎಂಬ ಹಣೆಪಟ್ಟಿ ಹೊತ್ತಿದೆ.
ಕುಟುಂಬ ಸದಸ್ಯರು ಈ ಕ್ರಮದಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮೂವರು ಮಕ್ಕಳಿಗೆ ಹಂಚಿಕೆಯಾದ ಈ ಆಸ್ತಿಯಲ್ಲಿ ಸುಮಾರು 8.9 ಎಕರೆ ಜಮೀನಿನ ಖಾತೆ ರದ್ದುಪಡಿಸಲು ಇಲಾಖೆ ಮುಂದಾಗಿದೆ. ಸಿದ್ದರಾಮಯ್ಯನವರಿಂದ ‘ದೇವರಾಜ ಅರಸು ಪ್ರಶಸ್ತಿ’ ಪಡೆದಿದ್ದ ಸಜ್ಜನ ಮಾಜಿ ಶಾಸಕರ ಕುಟುಂಬಕ್ಕೇ ಭೂ ಭದ್ರತೆ ಇಲ್ಲದಿದ್ದರೆ, ಇನ್ನು ಸಾಮಾನ್ಯ ರೈತರ ಗತಿ ಏನು ಎಂಬ ಆತಂಕ ಮಲೆನಾಡಿನಾದ್ಯಂತ ಮನೆಮಾಡಿದೆ.
ಈ ಬೆಳವಣಿಗೆಯು ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ರೈತರ ಹಕ್ಕುಗಳ ನಡುವಿನ ಸಂಘರ್ಷವನ್ನು ಉತ್ತುಂಗಕ್ಕೇರಿಸಿದೆ. ಹೆಸರು ಹೇಳಲು ಇಚ್ಛಿಸದ ಕುಟುಂಬದ ಸದಸ್ಯರೊಬ್ಬರು, “ಹಳೆಯ ಜಮೀನಿನಲ್ಲಿ ಪೈಪ್ಲೈನ್ ಮತ್ತು ಅಡಿಕೆ ಗಿಡಗಳನ್ನು ನಾಶಪಡಿಸಲಾಗಿದೆ,” ಎಂದು ದೂರಿದ್ದಾರೆ. ಆದರೆ, ಶಿವಮೊಗ್ಗ ಡಿಸಿಎಫ್ ಅಜ್ಜಯ್ಯ ಅವರ ಪ್ರಕಾರ, “ಮಂಜೂರಾದ ಮೂಲ ಜಮೀನು ಸುರಕ್ಷಿತವಾಗಿದೆ. ಹೊಸ ಒತ್ತುವರಿ ಜಮೀನನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ. ಸಿಸಿಎಫ್ ಕೋರ್ಟ್ಲ್ಲಿ ಈ ಜಮೀನು ವಿಚಾರಣೆ ಹಂತದಲ್ಲಿತ್ತು. ಆದರೆ ಲಿಂಗಪ್ಪನವರ ಮಗ ಫಣಿರಾಜ್ ಭೂಮಿಯನ್ನು ವಾಪಸ್ ಮರಳಿಸಲು ಒಪ್ಪಿಗೆ ನೀಡಿರುವ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.









