Ode to the west wind

Join Us on WhatsApp

Connect Here

Written by 5:45 am NEWS

ಸಿಗಂದೂರು ಪ್ರವಾಸಿಗರ ತುರ್ತು ಗಮನಕ್ಕೆ: ಲಾಂಚ್‌ ವಾಹನಗಳಿಗೆ ನಿಷೇಧ; ಬದಲಿ ಮಾರ್ಗ ವಿವರ ಇಲ್ಲಿದೆ:

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಂಕಷ್ಟ ಎದುರಾಗಿದೆ. ಮಳೆ ಬಾರದೇ, ಬಿಸಿಲ ಝಳಕ್ಕೆ  ಶರಾವತಿ ಹಿನ್ನೀರು ದಿನೇ ದಿನೇ ಬತ್ತುತ್ತಿದೆ.  ಲಾಂಚ್‌ ಚಲಾಯಿಸುವುದು ಕಷ್ಟವಾಗಿದೆ. ದ್ವೀಪದ ಜನರಿಗೆ ತೊಂದರೆಯಾಗದಿರಲಿ ಎಂದು ಲಾಂಚ್‌ಗಳನ್ನ ಜನರಿಗಷ್ಟೇ ಸೀಮಿತಗೊಳಿಸಿದ್ದಾರೆ. ಇಂದಿನಿಂದ ವಾಹನಗಳಿಗೆ ನಿಷೇಧ ಹೇರಲಾಗಿದೆ. ಪ್ರವಾಸಿಗರು ಇಲ್ಲಿಗೆ ಬಂದು ಪರದಾಡುವ ಬದಲು ಬದಲಿ ಮಾರ್ಗ ನೋಡಿಕೊಳ್ಳಬೇಕಿದೆ.

ಸಾಗರದಿಂದ ಇಪ್ಪತ್ತೈದು ಕಿಲೋಮೀಟರ್‌ ಅಂತರದಲ್ಲಿ ಶರಾವತಿ ನದಿ ಮೂವತ್ತು ಸಾವಿರ ಜನರಿರುವ ಹಳ್ಳಿಗಳನ್ನ ದ್ವೀಪವನ್ನಾಗಿಸಿದೆ. ದಶಕಗಳಿಂದಲೂ ಈ ಭಾಗದ ( ಕರೂರು ಭಾರಂಗಿ ಹೋಬಳಿ ) ಜನರು ಈ ಲಾಂಚ್‌ಗಳನ್ನೇ ನಂಬಿಕೊಂಡಿದ್ದಾರೆ. ಸಾಗರ ಪಟ್ಟಣಕ್ಕೆ ಬರಲು ಈ ವ್ಯವಸ್ಥೆಯೇ ಜನರಿಗೆ ಆಸರೆ.  ಹದಿನೈದು ವರ್ಷಗಳಲ್ಲಿ ಅರಿವೆಗೆ ಬಂದಿರದ  ಪರಿಸ್ಥಿತಿ ಮಲೆನಾಡಿನಲ್ಲಿ ಈಗ ತಲೆದೋರಿದೆ. ಈ ಬೇಸಿಗೆಯಲ್ಲಿ ಒಣಹವೆಯಂತೂ ನಾಲ್ಕು ವರ್ಷಗಳ ಹಿಂದಿನ ಸ್ಥಿತಿ ನೆನಪಿಸುತ್ತಿತ್ತು. ಈ ಎಲ್ಲಾ ವೈಪರೀತ್ಯಗಳು ಈಗ ಜನರ ಮೇಲೆ ಪರಿಣಾಮ ಬೀರಲು ಆರಂಭಿಸಿವೆ.

ಮುಂಗಾರು ಜೂನ್‌ ಮೊದಲ ವಾರದಲ್ಲೇ ಆರಂಭವಾಗಿಬಿಡುತ್ತೆ ಎಂಬ ಹವಾಮಾನ ಇಲಾಖೆ ಪ್ರಕಟಣೆ ಕೂಡ ಹುಸಿಯಾಯ್ತು. ಮಲೆನಾಡಿನ ಜೀವನದಿ ಶರಾವತಿ ಈಗ ಹಳ್ಳದಂತೆ ಮಾರ್ಪಾಡಾಗಿದೆ. ಹೊಸನಗರದ ಭಾಗದಲ್ಲಂತೂ ಹರಿವನ್ನೇ ನಿಲ್ಲಿಸಿದೆ. ಅರವತ್ತು ಅಡಿಗಿಂತಲೂ ಮೇಲೆ ತೇಲುತ್ತಿದ್ದ ಲಾಂಚ್‌ಗಳು ಈಗ ತಳ ಕಾಣುವ ಸ್ಥಿತಿಗೆ ತಲುಪಿವೆ. ನೀರಲ್ಲಿ ಹುದುಗಿದ ಮರಗಳು, ದಿಬ್ಬಗಳು ಲಾಂಚ್‌ಗೆ ತೊಡಕಾಗದಿರಲಿ ಎಂದು ಒಳನಾಡು ಜಲಸಾರಿಗೆ ಇಲಾಖೆ ಪ್ರವಾಸಿಗರ ವಾಹನಗಳನ್ನ ನಿಷೇಧಿಸಿ ಜನರ ಓಡಾಟಕ್ಕೆ ಮಾತ್ರ ಅನುವು ಮಾಡಿಕೊಟ್ಟಿದೆ. ಇನ್ನೊಂದು ವಾರ ಹೀಗೇ ಹೋದರೆ ಸಣ್ಣ ಲಾಂಚ್‌ ಅಥವಾ ಬೋಟ್‌ ಬಳಕೆ ಮಾಡಿ ಜನರನ್ನ ಸಾಗಿಸುವ ಪರಿಸ್ಥಿತಿ ಬಂದರೂ ಆಶ್ಚರ್ಯ ಇಲ್ಲ.

ಬಹಳ ಮುಖ್ಯವಾಗಿ ಸಿಗಂದೂರಿಗೆ ಬರುವ ಪ್ರವಾಸಿಗರು ವಾಹನಗಳನ್ನ ಹೊಳೆಬಾಗಿನಲ್ಲಿ ನಿಲ್ಲಿಸಿ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವುದು ಅಸಾಧ್ಯ. ಕೆಲವರು ಕೊಲ್ಲೂರು ಹೋಗಲು ಈ ಮಾರ್ಗ ಬಳಸುತ್ತಾರೆ. ಅಂತವರು ದಿನ ಕಳೆದರೂ ಸ್ಥಳ ಸೇರಲು ಆಗದಂತಹ ಪರಿಸ್ಥಿತಿ ಇದೆ. ಹಾಗಾಗಿ, ಈ ಭಾಗಕ್ಕೆ ಪ್ರವಾಸಕ್ಕೆ ಬರುವವರು ಈ ಮಾರ್ಗಗಳನ್ನ ಬಳಸಬೇಕು.

ಬೆಂಗಳೂರಿನಿಂದ ಬರುವವರು, ಸಿಗಂದೂರಿಗೆ ತೆರಳಲು ಸಾಗರಕ್ಕೆ ಬರಲೇ ಬಾರದು. ಶಿವಮೊಗ್ಗದಿಂದ ಹೊಸನಗರ ಬಂದು ಅಲ್ಲಿಂದ ನಗರ-ನಿಟ್ಟೂರು ಮಾರ್ಗವಾಗಿ ಸಿಗಂದೂರಿಗೆ ತೆರಳಬಹುದು. ಅಲ್ಲಿಂದ ವಾಪಸ್‌ ಬಂದು ಕೊಲ್ಲೂರಿಗೆ ಹೋಗಬಹುದು. ಭಟ್ಕಳ, ಹೊನ್ನಾವರಕ್ಕೂ ಸಿಗಂದೂರು ಮೂಲಕ ಹೋಗಬಹುದು. ಇನ್ನೂ ಹೊನ್ನಾವರ, ಸೊರಬದ ಕಡೆಯಿಂದ ಬರುವವರು ಜೋಗ-ಕಾರ್ಗಲ್‌ ಹಾದಿ ಬಳಸಿ ಸಿಗಂದೂರು ಬಂದು ಪುನಃ ಅದೇ ಹಾದಿಯಲ್ಲಿ ವಾಪಸ್‌ ತೆರಳಬಹುದು. ಪ್ರಯಾಣಿಕರಿಗೆ ಕನಿಷ್ಟ ನೂರು ಕಿಲೋಮೀಟರ್‌ ಹೊರೆಯಾದರೂ ಸಹ ಹಾದಿಯಲ್ಲಿ ತೊಡಕಿಲ್ಲ. ಅಲ್ಲಲ್ಲಿ ಕೆಲ ಪ್ರವಾಸಿ ತಾಣಗಳೂ ಸಿಗುತ್ತವೆ.

Visited 1 times, 1 visit(s) today
[mc4wp_form id="5878"]