ದಾವಣಗೆರೆ/ ಶಿವಮೊಗ್ಗ :
ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದ ಬಳಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆ ಸಕ್ರೆಬೈಲು ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಅವರ ಮೇಲೆ ಆನೆ ಮಾಡಿದ್ದು, ಗಾಯಗೊಂಡು ವಿನಯ್ ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೇಗೆ ನಡೀತು ದಾಳಿ:
ಮೂರು ದಿನಗಳಿಂದ ಸೂಳೆಕೆರೆಯ ಸುತ್ತಮುತ್ತ ಕಾಡಾನೆಯನ್ನು ಸೆರೆಹಿಡಿಯಲು ಶಿವಮೊಗ್ಗ-ಭದ್ರಾವತಿ- ಚನ್ನಗಿರಿ-ಹೊನ್ನಾಳಿಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಕಾರ್ಯಾಚರಣೆ ಕಳೆದೊಂದು ವಾರದಿಂದ ಮುಂದುವರೆದಿತ್ತು. ಆನೆಯ ಲದ್ದಿ ಸುಳಿವಿನ ಮೂಲಕ ಸುತ್ತಲಿನ ಪ್ರದೇಶದಲ್ಲಿ ಇರುವಿಕೆ ಪತ್ತೆಹಚ್ಚಿದ್ದ ತಂಡಕ್ಕೆ ಆನೆ ಆಘಾತ ನೀಡಿದೆ.
ಇನ್ನೇನು ಆನೆಯನ್ನು ಅರಿವಳಿಕೆ ಇಂಜೆಕ್ಷನ್ ನೀಡಬೇಕು ಎನ್ನುವಷ್ಟರಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್ರವರ ಮೇಲೆ ಆನೆ ದಾಳಿ ನಡೆಸಿದೆ.

ಅರಿವಳಿಕೆ ಚುಚ್ಚುಮದ್ದಿಗೂ ಬಗ್ಗದ ಕಾಡಾನೆ:
ಸೂಳೆಕೆರೆ ಬಳಿಯಿಂದ ನ್ಯಾಮತಿ ತಾಲ್ಲೂಕಿನ ಜೀನಳ್ಳಿ ಕಾಡಿನಲ್ಲಿ ಆನೆಯು ಇಂದು ಬೆಳಗ್ಗೆ ಪತ್ತೆಯಾಗಿತ್ತು. ಅದನ್ನು ಅರಿವಳಿಕೆ ಚುಚ್ಚುಮದ್ದು ನೀಡಿ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಂದುಕೊಂಡಂತೆ, ವೈದ್ಯ ಆನೆಗೆ ಅರಿವಳಿಕೆ ಚುಚ್ಚುಮದ್ದನ್ನು ಡಾರ್ಟ್ ಮಾಡಿದ್ದರು. ಆನೆಯು ಸಹ ಅರಿವಳಿಕೆ ಚುಚ್ಚುಮದ್ದಿನ ಪರಿಣಾಮವಾಗಿ ನೆಲಕ್ಕುರುಳಿತ್ತು. ಇದನ್ನ ಗಮನಿಸಿ ಸಿಬ್ಬಂದಿ ಆನೆಯ ಬಳಿಗೆ ಹೋಗಿದ್ದಾರೆ. ಆದರೆ ಇದಕ್ಕಿದ್ದಂತೆ ಎದ್ದ ಕಾಡಾನೆಯು ಇದ್ದಕ್ಕಿದ್ದಂತೆ ದಾಳಿಗೆ ಮುಂದಾಗಿದೆ. ಈ ವೇಳೆ ಅಲ್ಲಿಯೆ ಇದ್ದ ಡಾ.ವಿನಯ್ ಓಡಲು ಆರಂಭಿಸಿದ್ದಾರೆ. ಆದರೆ, ಕಲ್ಲು ತಗುಲಿ ಎಡವಿ ಬಿದ್ದಿದ್ಧಾರೆ. ಅಷ್ಟರಲ್ಲಿ ಆನೆಯು ಅವರ ಮೇಲೆ ದಾಳಿ ನಡೆಸಿ, ಸೊಂಟದ ಮೇಲೆ ಕಾಲಿಟ್ಟು ತಿವಿಯಲು ಮುಂದಾಗಿದೆ. ತಕ್ಷಣವೇ ಸಿಬ್ಬಂದಿ ಗನ್ ನಿಂದ ಎರ್ಫೈರ್ ಮಾಡಿ ಕೂಗಿದ್ದಾರೆ. ಆನೆ ವಿನಯರವರನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ. ಅರಣ್ಯ ಸಿಬ್ಬಂದಿ ವೈದ್ಯ ವಿನಯ್ ಅವರನ್ನ ಇಲಾಖೆಯ ವಾಹನದಲ್ಲಿಯೇ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಿದ್ದಾರೆ
ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಕಾಡಾನೆಯನ್ನ ಸಫಾರಿ ವೈದ್ಯ ಡಾ. ಮುರಳಿ ಮನೋಹರ್ ನೇತೃತ್ವ ವಹಿಸಿ ಸೆರೆ ಹಿಡಿದಿದ್ದಾರೆ. ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತರಲಾಗುತ್ತಿದೆ.
ಆನೆ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋಣ್ ತಂಡ, ಮಾವುತರು, ಪಶು ವೈದ್ಯಾಧಿಕಾರಿಗಳ ತಂಡದೊಡನೆ ಕಾರ್ಯಾಚರಣೆ ಆರಂಭಿಸಿದ್ದರು. ಸೋಮವಾರ ಬಸವಾಪಟ್ಟಣದ ಶೃಂಗಾರ ಭಾಗ್ ಬಳಿ ಇರುವ ಸಂಶಯ ವ್ಯಕ್ತವಾಗಿತ್ತು. ಆದರೆ ಮಂಗಳವಾರ ನ್ಯಾಮತಿಯ ಕೆಂಚಿಕೊಪ್ಪ ಸಮೀಪದ ಹನುಮಾಪುರ ಗಡಿ ಭಾಗ ಜಾಲಿ ಹೊಸೂರು ಹತ್ತಿರ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಸೆರೆಗೆ ಕಾರ್ಯಾಚರಣೆ ಮುಂದುವರಿಸಿದ್ದರು.
