ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ನಿಸರ್ಗದತ್ತವಾಗಿ ಬಂದ ಪ್ರವಾಸಿ ತಾಣಗಳಿವೆ. ಗಿರಿ ಶಿಖರಗಳು, ನದಿ-ಜಲಪಾತಗಳು, ಜಲಾಶಯಗಳೂ, ವನ್ಯಧಾಮ ಹೀಗೆ ಸಾಲು ಸಾಲು ಅಹ್ಲಾದಕಾರಿ ಸ್ಥಳಗಳಿವೆ. ಆದರೆ ಕೃತಕವಾಗಿ ನಿರ್ಮಿಸಿ, ಉಚಿತ ಪ್ರವೇಶ ನೀಡಿ, ದಿನಕ್ಕೆ ನೂರಾರು ಪ್ರವಾಸಿಗರನ್ನ ಆಕರ್ಷಣೆ ಮಾಡುವ ಸ್ಥಳಗಳು ಮಾತ್ರ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದಲ್ಲೂ ಅಪರೂಪ.

ಪ್ರವಾಸೋದ್ಯಮ ಹೆಸರಲ್ಲಿ ನೂರಾರು ಕೋಟಿ ವ್ಯಯಿಸಿ ಪ್ರಾಕೃತಿಕ ಪರಿಸರ ಹಾಳುಗೆಡವಿ ಜನರ ಕೋಪಕ್ಕೆ ಕಾರಣವಾಗುವ ನಿದರ್ಶನಗಳೇ ಅಧಿಕ. ಇಂತಹ ಅವೈಜ್ಞಾನಿಕ ಅಭಿವೃದ್ಧಿಗೆ ಅಣಕವೆಂಬಂತೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಜನಾಪುರ ಗಾರ್ಡನ್ ಇದೆ. ಈ ಗಾರ್ಡನ್ ಒಳಹೊಕ್ಕರೆ ಇತಿಹಾಸದ ಪುಸ್ತಕವನ್ನ ತಿರುವಿ ಹಾಕಿದ ಅನುಭವವಾಗುತ್ತೆ. ರೈತಾಪಿ ಬದುಕು, ಗ್ರಾಮೀಣ ಪರಿಸರ, ಕ್ರೀಡೆ, ಹೋರಾಟ ಸಂಪೂರ್ಣ ಹಳ್ಳಿ ಚಿತ್ರಣ ತೆರೆದುಕೊಳ್ಳುತ್ತೆ. ಬ್ರಿಟೀಷ್ ಭಾರತದಲ್ಲಿ ಮೊದಲು ಸ್ವಾತಂತ್ರ ಘೋಷಿಸಿಕೊಂಡು ಇಡೀ ದೇಶವನ್ನೇ ಬೆರಗುಗೊಳಿಸಿದ್ದ ಈಸೂರು ದಂಗೆ ಹಾಗೂ ವೀರಮರಣವನ್ನಪ್ಪಿದ ರೈತರ ಸಾಹಸಗಾಥೆ ಕಣ್ಮುಂದೆ ಬರುತ್ತೆ.

ಶಿಕಾರಿಪುರ ಅರೆಮಲೆನಾಡು ಹಾಗೂ ಬಯಲು ಸೀಮೆಯ ಸೊಗಡನ್ನ ಮೈತಳೆದುಕೊಂಡಿರುವ ತಾಲೂಕು. ಶಿವಶರಣ-ಶರಣೆಯರು, ಐತಿಹಾಸಿಕ ಸ್ಮಾರಕಗಳ ನೆಲೆವೀಡು. ರೈತ ಹೋರಾಟಗಳಿರಬಹುದು, ರಾಜಕಾರಣವಿರಬಹುದು, ಸಾಹಿತ್ಯಕ್ಕೂ ಸಹ ತನ್ನದೇ ಕೊಡುಗೆ ನೀಡಿದೆ. ರಾಜ್ಯದ ಧೀಮಂತ ನಾಯಕ ಯಡಿಯೂರಪ್ಪನವರ ಕರ್ಮಭೂಮಿ. ಯಡಿಯೂರಪ್ಪನವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಶಿಕಾರಿಪುರದ ಚಿತ್ರಣವೂ ಬದಲಾಯ್ತು. ಶಿಕಾರಿಪುರ ಈಗ ರಾಜ್ಯದಲ್ಲೇ ಹೆಚ್ಚು ನೀರಾವರಿ ಸೌಕರ್ಯ ಹೊಂದಿದ ತಾಲೂಕಾಗಿ ಮಾರ್ಪಾಡು ಹೊಂದುತ್ತಿದೆ. ಕೃಷಿ ಹಾಗೂ ಕುಡಿಯುವ ನೀರಿಗಾಗಿ ನಿರ್ಮಾಣವಾಗಿರುವ ವಿಶಿಷ್ಟ ಡ್ಯಾಂ ಅಂಜನಾಪುರದಲ್ಲಿದೆ. ಇದರ ತಟದಲ್ಲಿ ಸಿಮೆಂಟ್ ಶಿಲ್ಪಗಳಿಂದ ನಿರ್ಮಾಣವಾದ ಸುಂದರವಾದ ಉದ್ಯಾನವನವಿದೆ. ರೈತರಿಗಾಗಿ ಸಮರ್ಪಿತವಾದ ಈ ಉದ್ಯಾನವನ ಗ್ರಾಮೀಣ ಬದುಕು ಹಾಗೂ ಹೋರಾಟವನ್ನ ಚಿತ್ರಿಸಿದೆ.

ಈ ಕಲಾಕೃತಿಗಳಲ್ಲಿ ಅತೀ ಮುಖ್ಯವಾದದ್ದು ಈಸೂರು ದಂಗೆಯ ಸಮಯದಲ್ಲಿ ನೇಣಿಗೆ ಶರಣಾದ ರೈತರ ದೃಶ್ಯ, ಸಾಲುಗಟ್ಟಿ ಹೊರಟ ಎತ್ತಿನಗಾಡಿಗಳು. ಇನ್ನುಳಿದಂತೆ ರೈತ ಮಹಿಳೆಯರ ಹೊಲದ ಕೆಲಸ ಹಾಗೂ ಒಕ್ಕಲುತನ. ದನಗಾಹಿ ಹಾಗೂ ಕುರಿಗಾಹಿಗಳ ಪ್ರತಿಮೆಗಳೂ ಸಹ ಇಲ್ಲಿವೆ. ಇಂತಹದೊಂದು ಅಧ್ಭುತ ಗಾರ್ಡನ್ ಶಿಕಾರಿಪುರದ ಸರದಾರ ಮಾಜಿ ಸಿಎಂ ಯಡಿಯೂರಪ್ಪನವರ ಕೊಡುಗೆ. ನಾಲ್ಕು ವರ್ಷಗಳ ಹಿಂದೆ ಈ ಗಾರ್ಡನ್ ಲೋಕಾರ್ಪಣೆಯಾಗಿದ್ದು ನೀರಾವರಿ ಇಲಾಖೆಯ ನಿರ್ವಹಣೆಯಲ್ಲಿದೆ. ಈ ಸ್ಥಳಕ್ಕೆ ಭೇಟಿ ನೀಡುವವರು ಸರಿಯಾಗಿ ಗಮನಿಸಿದರೆ ಎತ್ತಿನ ಬಂಡಿಯ ಸಾಲಲ್ಲಿ ಯಡಿಯೂರಪ್ಪನವರ ಪ್ರತಿಕೃತಿಯೂ ಇದೆ ಎಂಬುದು ಮತ್ತೊಂದು ವಿಶೇಷ.

ಶಿಕಾರಿಪುರದಿಂದ ಈಸೂರು ಮಾರ್ಗವಾಗಿ ಸಾಗಿದರೆ ಈ ಉದ್ಯಾನವನ ತಲುಪಬಹುದು ಅಥವಾ ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಚೊರಡಿ ಬಳಿ ತಿರುವು ತೆಗೆದುಕೊಂಡರೆ ಅಂಜನಾಪುರ ಜಲಾಶಯದ ಉದ್ಯಾನವನ ತಲುಪಬಹುದು.
