ಶಿವಮೊಗ್ಗ ಜಿಲ್ಲೆ ಪ್ರಾಕೃತಿಕ ಸಂಪನ್ನ ಪ್ರವಾಸಿ ತಾಣಗಳನ್ನ ಹೊಂದಿದೆ. ನದಿ, ಝರಿ, ಜಲಪಾತಗಳು, ಬೆಟ್ಟ ಗುಡ್ಡ ಕಣಿವೆಗಳು, ವನ್ಯಧಾಮ, ಪಕ್ಷಿಧಾಮಗ ನೆಲೆಬೀಡಾಗಿದೆ. ಅತೀ ಹೆಚ್ಚು ಜಲಾಶಯಗಳನ್ನ ಹೊಂದಿರುವ ಜಿಲ್ಲೆ ಕೂಡ ಶಿವಮೊಗ್ಗ. ಮಲೆನಾಡು ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಜಿಲ್ಲೆ ದಶಕಗಳಿಂದ ವಿವೇಚನಾರಹಿತ ಯೋಜನೆಗಳಿಂದ ಪಾಕೃತಿಕವಾಗಿ ಕ್ಷೀಣವಾಗುತ್ತಿದೆ.

ಅದಕ್ಕೆ ಉದಾಹರಣೆ ಎಂದರೆ ಶಿವಮೊಗ್ಗ ನಗರಕ್ಕೆ ಸಮೀಪವಿರುವ ಮಂಡಗದ್ದೆ ಪಕ್ಷಿಧಾಮ. ತುಂಗಾ ತೀರದಲ್ಲಿ ತೀರ್ಥಹಳ್ಳಿ ರಸ್ತೆಯ ಪಕ್ಕಕ್ಕೆ ಚಾಚಿಕೊಂಡಿದ್ದ ಈ ಅಧ್ಭುತ ಪಕ್ಷಿಧಾಮದಲ್ಲಿ ವಲಸೆ ಪಕ್ಷಿಗಳ ಕಲರವ ಕೇಳುತ್ತಿತ್ತು. ಹೊಳೆಲಕ್ಕಿ ಮರದ ಮೇಲೆ ಹತ್ತಾರು ಪ್ರಬೇಧದ ಸಾವಿರಾರು ಪಕ್ಷಿಗಳು ಪ್ರತೀ ವರ್ಷ ಮೊಟ್ಟೆಇಟ್ಟು ಮರಿ ಮಾಡಿಕೊಂಡು ವಾಪಸ್ ತೆರಳುತ್ತಿದ್ದವು. ಆದರೆ ಪೂರಕ ವಾತಾವರಣವಿಲ್ಲದೇ ಈ ಪ್ರದೇಶ ಕಳೆಗುಂದಿತ್ತು.

ಮಂಡಗದ್ದೆ ಪಕ್ಷಿಧಾಮವನ್ನ ಪುನಶ್ಚೇತನ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ವ್ಯಂಗ್ಯ ಎಂದರೆ ಈಗಾಗಲೇ ಘೋಷಣೆಯಾಗಿರುವ ಪಕ್ಷಿಧಾಮವನ್ನ ಮರು ಘೋಷಣೆ ಮಾಡಲು ಸರ್ಕಾರ ಮುಂದಾಗಿದೆ. ಇಷ್ಟು ವರ್ಷಗಳಲ್ಲಿ ಕಳೆದುಕೊಂಡ ವಲಸೆ ಹಕ್ಕಿಗಳನ್ನ ವಾಪಸ್ ಕರೆಸಲು ಈ ಯೋಜನೆಯಿಂದ ಸಾಧ್ಯವಿಲ್ಲ. ಇದೊಂದು ವಿವೇಚನಾರಹಿತ ಯೋಜನೆ ಎಂಬುದು ತಜ್ಞರ ಅಭಿಪ್ರಾಯ. ತುಂಗಾ ಜಲಾಶಯ ನಿರ್ಮಾಣವಾದ ಮೇಲೆ ಹಿನ್ನೀರಿನಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಇಲ್ಲಿಗೆ ಬರುತ್ತಿದ್ದ ವಲಸೆ ಹಕ್ಕಿಗಳೆಲ್ಲಾ ನೆಲೆ ಕಳೆದುಕೊಂಡು, ಕೆಲವೊಮ್ಮೆ ಮೊಟ್ಟೆ, ಮರಿಗಳೆಲ್ಲಾ ಕೊಚ್ಚಿಕೊಂಡು ಹೋಗುತ್ತಿದ್ದವು. ದಿನಗಳುರುಳಿದಂತೆ ಈ ಭಾಗಕ್ಕೆ ಬರುವ ಪಕ್ಷಿಗಳು ಕ್ಷೀಣವಾಗಿವೆ. ಈ ಹಕ್ಕಿಗಳು ಬೇರೆಲ್ಲೋ ನೆಲೆ ಹುಡುಕಿಕೊಂಡು ಹೋಗಿರಬಹುದು. ಅನಧಿಕೃತ ಪಂಪ್ಸೆಟ್ಗಳು, ಮರಳು ಗಣಿಗಾರಿಕೆ, ತುಂಗಾ ನಾಲೆಯಿಂದ ಭದ್ರಾಕ್ಕೆ ನೀರು ಹರಿಸುವ ಯೋಜನೆಗಳಿಂದ ಮಂಡಗದ್ದೆ ಪರಿಸರ ಹಾಳಾಗಿ ಹೋಗಿದೆ.

ಸ್ಥಳೀಯ ಜನ ಪ್ರತಿನಿಧಿಗಳು ಮಂಡಗದ್ದೆ ಪಕ್ಷಿಧಾಮವನ್ನ ಅಧಿಕೃತ ಎಂದು ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ವಾಸ್ತವದಲ್ಲಿ ಈ ಮಂಡಗದ್ದೆ ಪಕ್ಷಿಧಾಮವನ್ನ ೧೯೭೪ರಲ್ಲೇ ಸರ್ಕಾರ ಸುತ್ತೋಲೆ ಹೊರಡಿಸಿ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಸೇರಿಸಿದೆ. ಪುನಃ ಘೋಷಣೆ ಮಾಡಬೇಕು ಎಂದು ಹೇಳುವುದು ಅನಗತ್ಯ. ಈತನಕ ಬಂದ ಅನುದಾನ ಏನಾಯ್ತು ಎಂದು ಯಾರೂ ಪ್ರಶ್ನೆ ಮಾಡಿಲ್ಲ.

ಈ ಎಲ್ಲಾ ಎಡವಟ್ಟಿಗೆ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು. ಮಂಡಗದ್ದೆ ಹಿಂದೆಯೇ ಪಕ್ಷಿಧಾಮವೆಂದು ಘೋಷಣೆಯಾಗಿತ್ತು ಎಂಬುದು ಅಧಿಕಾರಿಗಳಿಗೂ ಗೊತ್ತಿಲ್ಲ ಎಂದರೆ ವಿಪರ್ಯಾಸ. ಇಂತಹ ವ್ಯವಸ್ಥೆಯಿಂದ ಮಂಡಗದ್ದೆ ಪುನಶ್ಚೇತನ ಸಾಧ್ಯವಿಲ್ಲ. ಇದೊಂದು ಹಣ ಲೂಟಿ ಮಾಡುವ ಯೋಜನೆ. ಇವರೆಲ್ಲಾ ಸ್ಥಳ ಬದಲಾಯಿಸಿದ ಪಕ್ಷಿಗಳನ್ನ ಎಲ್ಲಿಂದ ತರ್ತಾರೆ ಎಂಬುದೇ ಯಕ್ಷಪ್ರಶ್ನೆ..!