ಶಿವಮೊಗ್ಗದಲ್ಲಿ ಮಳೆ ಆರ್ಭಟ ಹೆಚ್ಚಿದೆ. ಕಾಡು-ಮೇಡು, ಗಿರಿ-ಶಿಖರಗಳೆಲ್ಲಾ ಜಲಧಾರೆಯಿಂದ ಬಸಿಯುತ್ತಿವೆ. ಜಲಾಶಯಗಳು ತುಂಬುವ ಆಶಾಭಾವನೆ ಮೂಡಿಸಿದೆ. ಹವಾಮಾನ ಇಲಾಖೆ ಇನ್ನೂ ಎರಡು ದಿನ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಪ್ರವಾಸಿಗರೂ ಸಹ ನಿರೀಕ್ಷೆಗೂ ಮೀರಿ ಜಿಲ್ಲೆಯ ನಾನಾ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ನಿಷೇಧಿತ ಅರಣ್ಯ ಪ್ರದೇಶದೊಳಗಿನ ಜಲಪಾತಗಳನ್ನ ಹುಡುಕಿ ಹುಚ್ಚಾಟ ಮಾಡುತ್ತಿದ್ದಾರೆ.

ಪಶ್ಚಿಮ ಘಟ್ಟ ಸಾಲಿನ ಸುಂದರ ಊರು ಆಗುಂಬೆ. ಮಳೆ ಕಾಡಿನ ಸುಂದರ ಪರಿಸರದಲ್ಲಿ ಮಳೆಗೆ ಹತ್ತಾರು ಜಲಪಾತಗಳು ಗೋಚರವಾಗುತ್ತವೆ. ಗೋಂಡಾರಣ್ಯದ ಮಧ್ಯೆ ಇರುವ ಜೋಗಿಗುಂಡಿ, ಕೂಡ್ಲುತೀರ್ಥ, ಒನಕೆ ಅಬ್ಬಿ, ಬರ್ಕಣ ಜಲಪಾತಗಳಿಗೆ ಜನರು ಲಗ್ಗೆ ಇಡುತ್ತಿದ್ದಾರೆ. ಆಗುಂಬೆ ಕ್ರಾಸ್ನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಸಿಗುವ ಜೋಗಿಗುಂಡಿಯೂ ಸಹ ಸೋಮೇಶ್ವರ ನಿಷೇಧಿತ ಅರಣ್ಯ ವ್ಯಾಪ್ತಿಯಲ್ಲಿ ಬರುವ ಸುಂದರ ಜಲಪಾತ.
ಕಾಡಿನ ನೀರಿಗೆ ತೊರೆಯಂತೆ ಹರಿದು ಜಲಪಾತ ಸೃಷ್ಟಿಸಿಕೊಂಡು ಮಾಲತಿ ನದಿ ಮೂಲಕ ತುಂಗಾ ನದಿ ಸೇರುತ್ತದೆ. ಜೋಗಿಗುಂಡಿ ಪ್ರವಾಸಕ್ಕೆ ಅರಣ್ಯ ಇಲಾಖೆಯೇ ಪ್ರವಾಸಿಗರಿಗೆ ಟಿಕೆಟ್ ನೀಡಿ ಬಿಡುತ್ತಿದೆ. ಆದರೆ ಇಲಾಖೆ ನೀಡುವ ಯಾವುದೇ ಸೂಚನೆಗಳನ್ನ ಪ್ರವಾಸಿಗರು ಫಾಲೋ ಮಾಡುತ್ತಿಲ್ಲ. ಜಲಪಾತದ ಆಳ ಅರಿಯದೇ ಇಳಿಯುತ್ತಿದ್ದಾರೆ. ಈಜಾಡುತ್ತಾರೆ. ಅರಣ್ಯ ಇಲಾಖೆ ಯಾವುದೇ ಸಿಬ್ಬಂದಿಯನ್ನೂ ನಿಯೋಜಿಸದೇ ಪ್ರವಾಸಿಗರ ಹುಚ್ಚಾಟಗಳಿಗೆ ನಿಯಂತ್ರಣವಿಲ್ಲದಂತಾಗಿದೆ. ಆಗುಂಬೆ ಕರಾವಳಿ ಹಾಗೂ ಬೆಂಗಳೂರು ಭಾಗದ ಜನರಿಗೆ ಉತ್ತಮ ಸಂಪರ್ಕ ಹೊಂದಿದೆ. ಚಿಕ್ಕಮಗಳೂರಿನಕ ಕಡೆಯಿಂದ, ಉಡುಪಿ-ಮಂಗಳೂರು ಕಡೆಯಿಂದ ಬೇಗನೇ ತಲುಪಬಲ್ಲ ಊರು. ಸಹಜವಾಗಿ ಜನ ಮಾರ್ಗ ಮಧ್ಯೆ ಈ ಭಾಗದ ಪ್ರವಾಸಿತಾಣಗಳನ್ನ ಮಿಸ್ ಮಾಡೋದಿಲ್ಲ.
ಈ ಕುರಿತು ಮಾತನಾಡಿದ ಸ್ಥಳೀಯ ನಿತಿನ್ ಹೇರಳೆ, ಸೋಮೇಶ್ವರ ನಿಷೇಧಿತ ಅರಣ್ಯ ಪ್ರದೇಶದಲ್ಲಿರುವ ಈ ಜಲಪಾತದ ಆಳ, ಅಪಘಾತದ ಅರಿವಿಲ್ಲದೇ ಜನ ಈಜಾಡುತ್ತಾರೆ. ಪ್ರತೀ ವರ್ಷಕ್ಕಿಂತ ಈ ವರ್ಷ ಜನರು ಹೆಚ್ಚು ಬರುತ್ತಿದ್ದಾರೆ. ಮಲೆನಾಡಿನ ಅರಿವಿಟ್ಟುಕೊಂಡು ಪ್ರವಾಸ ಮಾಡಿದರೆ ಒಳಿತು ಎನ್ನುತ್ತಾರೆ.

ತೀರ್ಥಹಳ್ಳಿಯ ನಿವಾಸಿ ಸಾಗರ್ ಭಟ್ ಮಾತನಾಡಿ, ಮಳೆ ಆರ್ಭಟ ನಮಗೆಲ್ಲಾ ಸಂತಸ ಮೂಡಿಸಿದೆ. ಸಹಜವಾಗಿ ಪ್ರಾಕೃತಿಕ ಸೊಬಗೂ ಕೂಡ ತೆರೆದುಕೊಂಡಿದೆ. ತೀರ್ಥಹಳ್ಳಿ ಪಶ್ಚಿಮಘಟ್ಟ ಸಾಲಿನ ತಾಲೂಕು. ಆಗುಂಬೆ ನಿಷೇಧಿತ ಅರಣ್ಯ ವ್ಯಾಪ್ತಿಯ ಪ್ರದೇಶ. ಇಲ್ಲಿ ಸಾಕಷ್ಟು ಅಪಾಯಕಾರಿ ಸ್ಥಳಗಳಿವೆ. ಜನರು ಪ್ರಜ್ಞೆ ಇಲ್ಲದೇ ಸಾಹಸ ಮಾಡುವುದು ಜೀವಕ್ಕೆ ಕುತ್ತು ತರಬಲ್ಲದು ಎಂದು ಎಚ್ಚರಿಸಿದ್ದಾರೆ.
ಇತ್ತೀಚೆಗೆ, ವ್ಲೋಗರ್, ಯೂಟ್ಯೂಬರ್ಗಳಿಂದಲೂ ಗೋಪ್ಯವಾಗಿದ್ದ ಸ್ಥಳಗಳೆಲ್ಲಾ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆ ಹಣ ವಸೂಲು ಮಾಡುವುದರ ಜೊತೆ ಸಿಬ್ಬಂದಿ ನಿಯೋಜನೆ ಮಾಡಬೇಕು. ಜನ ಪ್ರಕೃತಿ ಆಸ್ವಾದಿಸಲು ಬರಬೇಕೇ ವಿನಹಃ ವಿಕೃತಿ ಮೆರೆಯಲು ಅಲ್ಲ.