ಹಾಸನ:
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಸಾವು ಪ್ರಕರಣಕ್ಕೆ ಪರಿಸರಾಸಕ್ತರು ಹಾಗೂ ಮಾಧ್ಯಮದವರು ನಿಯೋಜಿತ ವೈದ್ಯ ಡಾ. ರಮೇಶ್ ಅವರನ್ನೇ ಹೊಣೆಯನ್ನಾಗಿಸಿ ವೈದ್ಯನ ತಪ್ಪು ನಿರ್ಧಾರಗಳಿಂದಲೇ ಅರ್ಜುನ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದರು. ಕಾಡಾನೆ ಸೆರೆ ಸಮಯ ಅರ್ಜುನ ಆನೆಗೆ ಡಾರ್ಟ್ ಮಾಡಲಾಗಿತ್ತು, ಗುಂಡೇ ತಗುಲಿತ್ತು, ಇನ್ನೊಂದು ಆನೆಗೆ ಮಿಸ್ ಫೈರ್ ಆಗಿ ಅರಿವಳಿಕೆ ನೀಡಿದ್ದರು ಹೀಗೆ ಹತ್ತು ಹಲವು ಆರೋಪಗಳನ್ನ ಎದುರಿಸುತ್ತಿದ್ದ ವೈದ್ಯ ರಮೇಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ವೈದ್ಯರ ವಾದವೇನು..?
ಕಾರ್ಯಾಚರಣೆ ದಿನ ಡಿ.4ರಂದು ಕಾರ್ಯಾಚರಣೆ ವೇಳೆ ಅರ್ಜುನ ಆನೆ ಮಾವುತ ವಿನು, ಹಾಗು ಕರ್ನಾಟಕ ಭೀಮ ಆನೆಯ ಮಾವುತ ಗುಂಡ ಅರ್ಜುನನ ಮೇಲೆ ಇದ್ದೆವು. ಪ್ರಶಾಂತ್ ಆನೆ ಮೇಲೆ ಕೊಡಗಿನ ಡಿಆರ್ ಎಫ್ ಓ ರಂಜನ್ ಇದ್ದರು. ನಾವೇ ಹೆಸರಿಸಿಕೊಂಡ ಕಾಡಾನೆ ವಿಕ್ರಾಂತ್ ಹಾಗೂ ಮತ್ತೊಂದು ಕಾಡಾನೆ ಸೇರಿ ಎರಡು ಆನೆಗಳ ಸೆರೆಗೆ ಟಾರ್ಗೆಟ್ ಫಿಕ್ಸ್ ಆಗಿತ್ತು. ಕಾರ್ಯಾಚರಣೆ ವೇಳೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ವೈದ್ಯ ರಮೇಶ್.

ವಿಕ್ರಾಂತ್ ಆನೆ ಎದುರಾದರೆ ನಾನು ಹಾಗು ಇನ್ನೊಂದು ಆನೆ ಎದುರಾದರೆ ರಂಜನ್ ಅರಿವಳಿಕೆ ಮದ್ದು ನೀಡೊ ನಿರ್ಧಾರವಾಗಿತ್ತು.
ಅದರಂತೆ ನಾವು ಕಾಡಿನೊಳಗೆ ಎಂಟ್ರಿ ಆದಾಗ ಒಂದು ಆನೆ ಗುಂಪು ಕಾಣಿಸಿತು. ಅದರಲ್ಲಿ ವಿಕ್ರಾಂತ್ ಎಂಬ ಕಾಡಾನೆ ಇರಲಿಲ್ಲ.!! ನಾವು 400 ಮೀಟರ್ ಮುಂದೆ ಹೋದಾಗ ಒಂದು ಆನೆ ಕಾಣಿಸಿತು. ಕಾಡಿನಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿದ್ದರಿಂದ ಆನೆಯ ಮುಖ ಕಾಣಲಿಲ್ಲ. ಆನೆಯ ಹಿಂಬದಿಯ ಸ್ವಲ್ಪ ಭಾಗ ಕಾಣುತ್ತಿದ್ದಾಗ ಅದು ಸಣ್ಣ ಆನೆ ಎಂದು ಭಾವಿಸಿದೆವು. ಅಲ್ಲಿರೊ ಆನೆ ನಮ್ಮ ಟಾರ್ಗೆಟ್ ಆನೆಯೇ ಆಗಿತ್ತು. ಆದರೆ ಅದು ಸಲಗವೋ ಅಥವಾ ಹೆಣ್ಣಾನೆಯೋ ಎನ್ನೋದು ಖಾತ್ರಿ ಆಗಬೇಕಿತ್ತು. ಇದು ದೊಡ್ಡ ಆನೆ ಎಂದು ಖಾತ್ರಿ ಆದಾಗ ಆನೆ ಸುತ್ತುವರೆದುಕೊಂಡೆವು. ಇದನ್ನು ಡಾರ್ಟ್ ಮಾಡೋ ಬಗ್ಗೆ ರಂಜನ್ ಬಳಿ ಮಾತಾಡಿಕೊಂಡೆ. ನಾನು ಡಾರ್ಟ್ ಮಾಡ್ತೇನೆ ಎಂದು ಹೇಳಿ ಅರಿವಳಿಕೆ ಸಜ್ಜು ಮಾಡಿಕೊಂಡೆ.
ಫ್ರೆಷರ್ ಫಿಕ್ಸ್ ಮಾಡಿಕೊಂಡು ಸಿದ್ಧನಾದೆ. ಈ ವೇಳೆ ಆನೆ ಏಕಾಏಕಿ ದಾಳಿ ಮಾಡಿತು. ಅದು ಮುಖವನ್ನು ಮುಂದೆ ಮಾಡಿ ಬಂದಿದ್ದರಿಂದ ನಾನು ಮುಖಕ್ಕೆ ಡಾರ್ಟ್ ಮಾಡಲು ಆಗಲಿಲ್ಲ.

ಯಾವುದೇ ಆನೆಯ ಮುಖದ ಭಾಗಕ್ಕೆ, ಹೊಟ್ಟೆಗೆ ಇಂಜೆಕ್ಷನ್ ಹೊಡೆಯುವಂತಿಲ್ಲ.
ಅಕಸ್ಮಾತ್ ಹಾಗೆ ಇಂಜೆಕ್ಟ್ ಆದರೆ ಆನೆ ಜೀವಕ್ಕೆ ಅಪಾಯ ಇದೆ ಹಾಗಾಗಿ ಆಗ ಡಾರ್ಟ್ ಮಾಡಲು ಆಗಲಿಲ್ಲ. ಏಕಾ ಏಕಿ ಅರ್ಜುನನ ಮೇಲೆ ಆನೆ ದಾಳಿಮಾಡಿದಾಗ, ನಾವೆಲ್ಲಾ ಆನೆ ಮೇಲಿಂದ ವಾಲಿದೆವು. ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರಿವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಮೇಲೆದ್ದು ಸಾಕಾನೆ ಪ್ರಶಾಂತ್ ಕಾಲಿಗೆ ಬಿದ್ದಿದೆ. ಅದು ನನಗೆ ಗೊತ್ತಾಗಲೇ ಇಲ್ಲ. ಪ್ರಶಾಂತ್ ಗೆ ಅರಿವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೆ ನಾನು ಓಡಿದೆ. ಅಷ್ಟರಲ್ಲಿ ಅರ್ಜುನ ಕಾಡಾನೆ ಜೊತೆ ಫೈಟ್ ಮಾಡಿ ಓಡಿಸಿದ್ದ.
ನಾವು ಪ್ರಶಾಂತ್ ಆನೆ ಬಳಿ ಬಂದೆವು. ಅಲ್ಲಿ ರಿವರ್ಸ್ ಇಂಜೆಕ್ಷನ್ ಕೊಡೋ ವೇಳೆಗೆ ಕಾಡಾನೆ ಮತ್ತೆ ಬಂದು ಜಗಳಕ್ಕೆ ಬಿದ್ದಿದೆ. ಅರ್ಜುನನ ಮಾವುತ ವಿನು ಕೂಡ ನನ್ನೊಟ್ಡಿಗೆ ಇದ್ದಿದ್ದರಿಂದ ಅಲ್ಲಿ ಮತ್ತೊಬ್ಬ ಹುಡುಗ ಅರ್ಜುನನ ಮೇಲಿದ್ದ. ನಾವು ವಾಪಸ್ ಓಡೋ ವೇಳೆಗೆ ಅಲ್ಲಿ ಎರಡೂ ಆನೆಗಳ ನಡುವೆ ಜಗಳ ಶುರುವಾಗಿತ್ತು. ನಾನು ಮತ್ತೊಂದು ಸುತ್ತು ಅರಿವಳಿಕೆ ಲೋಡ್ ಮಾಡಿ ಕಾಡಾನೆಗೆ ಹೊಡೆದೆ. ಆದರೆ ಅ ಆನೆ ಕೆಳಗೆ ಬೀಳಲಿಲ್ಲ. ಅಷ್ಟು ಹೊತ್ತಿಗೆ ಅರ್ಜುನನಿಗೆ ಗಂಭೀರವಾಗಿ ಗಾಯವಾಗಿ ಕೆಳಗೆ ಬಿದ್ದಿದ್ದ. ಈ ಆನೆಗಳ ಕಾಳಗ ಶುರುವಾದಾಗ ಬೇರೆ ಆನೆಗಳೂ ಸಹ ಹೆದರಿ ಓಡಿವೆ. ಅರ್ಜುನ ತಾನೂ ಪ್ರಾಣ ಬಿಟ್ಟು ನಮ್ಮ ನ್ನ ಉಳಿಸಿದ್ದಾನೆ.

ಅರ್ಜುನನ ಸಾವು ನೆನೆದು ಭಾವುಕನಾದ ವನ್ಯಜೀವಿ ವೈದ್ಯ ರಮೇಶ್ ತಾನು ನಿತ್ಯ ಹೊರ ಬರುವಾಗ ಕೈ ಮುಗಿದು ಬರಬೇಕು. ನಾವು ಬದುಕಿರೋದು ಅರ್ಜುನನಿಂದ ಎಂದರು. ಯಾವುದೇ ಕಾರಣದಿಂದ ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಯಾರ ಬಳಿಯು ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರಲ್ ಚರ್ರೆ ಕೋವಿ ಮಾತ್ರ. ಅದರಲ್ಲಿ ಹಾರಿದ ಚರ್ರೆಯಿಂದ ಆನೆ ಸಾಯೋದಿಲ್ಲ. ಇದನ್ನ ಕಾಡಾನೆ ಹೆದರಿಸಲು ಮಾತ್ರ ಬಳಕೆ ಮಾಡ್ತೇವೆ. ಅರ್ಜನನ ಕಾಲಿಗೆ ಕೂಳೆ ಹೊಡೆದು ಗಾಯ ಆಗಿತ್ತು. ಅದನ್ನ ಮಾವುತ ವಿನು ಅಲ್ಲೆ ಗಮನಿಸಿದ್ದಾನೆ. ಕಾರ್ಯಾಚರಣೆ ವೇಳೆ ಯಾವುದೇ ಲೋಪ ಆಗಿಲ್ಲ. ಜನರು ದಸರಾ ಅಂಬಾರಿ ಹೊತ್ತಾಗ ಮಾತ್ರ ಅರ್ಜುನನ ನೋಡಿರ್ತಾರೆ. ನಾವು ನಿತ್ಯ ಅವನ ಜೊತೆ ಇರೋರು. ನಮಗೆ ಆಗಿರೊ ನೋವು ಹೇಳಲು ಆಗಲ್ಲ. ನಾನು ಇದುವರೆಗೆ 65 ಆನೆ ಸೆರೆ ಕಾರ್ಯಾಚರಣೆ ಮಾಡಿದ್ದೇನೆ. 40 ಆನೆಗಳಿಗೆ ನಾನೇ ಅರಿವಳಿಕೆ ಮಾಡಿದ್ದೇನೆ. 7 ಹುಲಿ, 50 ಕ್ಕೂ ಹೆಚ್ಚು ಚಿರತೆ, 10 ಕರಡಿಗಳಿಗೆ ಡಾರ್ಟ್ ಮಾಡಿದ್ದೇನೆ. ಎಲ್ಲವೂ ಕೂಡ ಯೋಜನೆ ಯಂತೆಯೇ ನಡೆಯಿತು. ಆದರೆ ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಡಿದೆ. ಬಹುಶಃ ಮಾವುತ ವಿನು ಅರ್ಜುನನ ಮೇಲೆ ಇದ್ದಿದ್ದರೆ ಹೋರಾಟ ಮಾಡಬಹುದಿತ್ತಾ ಅಥವಾ ಇಲ್ಲ ಎಂದು ಹೇಳೋದು ಕಷ್ಟ. ಅರ್ಜುನನ ಸಾವಿನ ಬಗ್ಗೆ ಹರಡಿದ್ದ ವದಂತಿಗಳು ಸತ್ಯಕ್ಕೆ ದೂರ ಎಂದು ರಮೇಶ್ ಹೇಳಿದ್ದಾರೆ.