ಚಾಮರಾಜನಗರ:
ವಿಷಯ: ದಿನಾಂಕ: 21-06-2024 ರ ಸಂಜೆ, ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಶಾಖೆಯ ಲೊಕ್ಕನಹಳ್ಳಿ ಪಶ್ಚಿಮ ಗಸ್ತಿನ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ, ದೊಡ್ಡಸಂಪಿಗೆ ಮೀಸಲು ಅರಣ್ಯದ ಸ್ಥಳೀಯವಾಗಿ ಕರೆಯಲ್ಪಡುವ ಬರಳ್ಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯವರು ಗಸ್ತು ಸಂದರ್ಭದಲ್ಲಿ ಒಂದು ಹುಲಿಯ ಮೃತದೇಹ ಕಂಡುಬಂದಿರುತ್ತದೆ. ಈ ವಿಚಾರವನ್ನು ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್.ಟಿ.ಸಿ.ಎ.) ರವರ ಎಸ್.ಓ.ಪಿ.ಯ ಅನುಗುಣವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕ್ರಮವಹಿಸಿರುತ್ತಾರೆ.
ಇದರಂತೆ ದಿನಾಂಕ 22-06-2024 ರಂದು ಸದರಿ ಹುಲಿಯ ಮರಣೋತ್ತರ ಪರೀಕ್ಷೆಯನ್ನು ಕ್ರಮಕೈಗೊಳ್ಳಲು ಎಸ್.ಓ.ಪಿ. ಯ ಪ್ರಕಾರ ಕಮಿಟಿಯನ್ನು ರಚಿಸಲಾಗಿರುತ್ತದೆ. ಸದರಿ ಕಮಿಟಿಯಲ್ಲಿ ಶ್ರೀಮತಿ ದೀಪ್ ಜೆ. ಕಂಟ್ರಾಕ್ಟರ್ (ಭಾ.ಅ.ಸೇ) ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ, ಶ್ರೀ ಜಿ. ಮಲ್ಲೇಶಪ್ಪ ಮುಖ್ಯ ವನ್ಯಜೀವಿ ಪರಿಪಾಲಕರ ನಾಮನಿರ್ದೇಶಿತ ಪ್ರತಿನಿಧಿ, ಕು| ಕೃತಿಕ ಆಲನಹಳ್ಳಿ ಗೌರವ ವನ್ಯಜೀವಿ ಪರಿಪಾಲಕರು ಮತ್ತು ಎನ್.ಟಿ.ಸಿ.ಎ. ನಾಮನಿರ್ದೇಶಿತ ಪ್ರತಿನಿಧಿ, ಡಾ| ಮಿರ್ಜಾ ವಾಸೀಂ ಪಶುವೈದ್ಯಾಧಿಕಾರಿಗಳು, ಡಾ| ಶಿವರಾಜು ಎಸ್, ಪಶುವೈದ್ಯಾಧಿಕಾರಿಗಳು, ನಂದಗೋಪಾಲ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀ ವಾಸು ಬಿ.ಎಸ್. ವಲಯ ಅರಣ್ಯಾಧಿಕಾರಿ, ಶ್ರೀ ಶುಯಿಬ್ ಪಾಷಾ, ಪ್ರಾಂಶುಪಾಲರು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ತಿಮ್ಮರಾಜೀಪುರ ಇವರುಗಳ ಹಾಜರಾತಿಯಲ್ಲಿ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಕ್ರಮವಹಿಸಲಾಯಿತು.

ಹುಲಿಯು ಅಂದಾಜು 5-6 ವರ್ಷ ವಯಸ್ಸಿನ ಹೆಣ್ಣು ಹುಲಿಯಾಗಿದ್ದು, ಚರ್ಮ ಸಹಿತ ಎಲ್ಲಾ ಆವಯವಗಳು ಇರುತ್ತವೆ. ಎಸ್.ಓ.ಪಿ.ಯ ಪ್ರಕಾರ ಕಮಿಟಿಯ ಸದಸ್ಯರ ಹಾಜರಾತಿಯಲ್ಲಿ ಹುಲಿಯ ಮರಣೋತ್ತರ ಪರೀಕ್ಷೆಯನ್ನು ನುರಿತ ವನ್ಯಜೀವಿ ತಜ್ಞರಾದ ಇಬ್ಬರು ಪಶುವೈದ್ಯರುಗಳು ಜರುಗಿಸಿದ್ದು, ಮೃತ ಹುಲಿಯ ಸಾವು ಸ್ವಾಭಾವಿಕವೆಂದು ದೃಢಪಡಿಸಿರುತ್ತಾರೆ. ಹುಲಿಯ ಮೃತ ದೇಹದ ಸಂಪೂರ್ಣ ಕಳೆಬರವನ್ನು ಯಥಾಸ್ಥಿತಿಯಲ್ಲಿ ಘಟನಾ ಸ್ಥಳದ ಬಳಿ ಎಸ್.ಓ.ಪಿ. ಪ್ರಕಾರ ವಿಲೇ ಮಾಡಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಉಪ ವಿಭಾಗ, ಯಳಂದೂರು.