ಮೈಸೂರು:
ಸೆರೆಯಾದ ಚಿರತೆ ಜತೆ ಸೆಲ್ಫಿಗೆ ಯತ್ನಿಸಿದ ಯುವಕ ಮೈ ಪರಚಿಕೊಂಡು ಆಸ್ಪತ್ರೆ ಸೇರಿದ ಘಟನೆ ನಂಜನಗೂಡು ತಾಲೂಕಿನ ಯಾಲಹಳ್ಳಿಯಲ್ಲಿ ನಡೆದಿದೆ.
ಬಹಳ ದಿನಗಳಿಂದ ಈ ಭಾಗದಲ್ಲಿ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದ ಚಿರತೆಯನ್ನ ಗ್ರಾಮಸ್ಥರು, ಊರಿನ ಮಹದೇವಪ್ಪ ಎಂಬುವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ಕೂಡಿ ಹಾಕಿದ್ದರು.ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್, ಜನಾರ್ಧನ್ ತಂಡ
ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಸಹಜವಾಗಿ ಚಿರತೆ ನೋಡಲು ಜನ ಸೇರಿದ್ದರು.ಚಿರತೆ ಜತೆ ಸೆಲ್ಫಿ ಕ್ಲಿಕ್ಕಿಸಲು ಗ್ರಾಮದ ಯುವಕ ಜಯಶಂಕರ್ ಮುಂದಾಗಿದ್ದ. ಚಿರತೆ ಜತೆ ಸೆಲ್ಫಿ ತೆಗೆಯಲು ಯತ್ನಿಸಿದ್ದ ವೇಳೆ ಜಯಶಂಕರ್ ಮೇಲೆ ಚಿರತೆ ದಾಳಿ ನಡೆಸಿದೆ. ಕೆಲವೇ ಸೆಕೆಂಡ್ ಗಳಲ್ಲಿ ಯುವಕನಿಗೆ ಸಿಕ್ಕಲ್ಲೆಲ್ಲಾ ಚಿರತೆ ಪರಚಿದೆ. ಗಾಯಗೊಂಡ ಯುವಕನನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕ ಚೇತರಿಸಿಕೊಂಡಿದ್ದು ಮನೆ ಸೇರಿಕೊಂಡಿದ್ದಾನೆ. ಸೆರೆಯಾದ ಚಿರತೆಯನ್ನ ಸಿಬ್ಬಂದಿ ಸಂರಕ್ಷಿತ ಅರಣ್ಯದೊಳಗೆ ಬಿಟ್ಟರೆಂದು ಮಾಹಿತಿ ಇದೆ.