ಹಾಸನ :ಮೂರನೇ ದಿನದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದ್ದು ಮತ್ತೊಂದು ದೈತ್ಯಾಕಾರದ ನರಹಂತಕ ಕಾಡಾನೆ ಸೆರೆಯಾಗಿದೆ.
ಸಕಲೇಶಪುರ ತಾಲ್ಲೂಕಿನ, ಹೆತ್ತೂರು ಹೋಬಳಿ ನಿಡಿಗೆರೆ ಫಾರೆಸ್ಟ್ನಲ್ಲಿ ಸೀಗೆ ಹೆಸರಿನ ಒಂಟಿಸಲಗವನ್ನು ಅರಣ್ಯ ಇಲಾಖೆ ತಂಡ ಸೆರೆ ಹಿಡಿದಿದೆ. ಶನಿವಾರ ಮಧ್ಯಾಹ್ನ ಏಳು ಕಾಡಾನೆಗಳೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನ ಆಪರೇಷನ್ ಎಲಿಫೆಂಟ್ ಟೀಂ ಆರಂಭಿಸಲಾಗಿತ್ತು.
ಆದರೆ ಸೀಗೆ ಕಾಡಾನೆ ಕಾಡಿನೊಳಗೆ ಸೇರಿಕೊಂಡಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬೆಳಿಗ್ಗೆಯಿಂದಲೇ ಸೀಗೆಯನ್ನ ಟ್ರ್ಯಾಕ್ ಮಾಡುತ್ತಿದ್ದರು. ನಿಡಿಗೆರೆ ಅರಣ್ಯ ಪ್ರದೇಶದಲ್ಲಿ ಇರುವಿಕೆ ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ಬಿಕ್ಕೋಡು ಬಳಿಯಿರುವ ತಾತ್ಕಾಲಿಕ ಶಿಬಿರದಿಂದ ಲಾರಿಗಳ ಮೂಲಕ ನಿಡಿಗೆರೆ ಅರಣ್ಯ ಪ್ರದೇಶದಕ್ಕೆ ಸಾಕಾನೆಗಳ ಸ್ಥಳಾಂತರ ಮಾಡಿದರು. ಮಧ್ಯಾಹ್ನ 12:20 ಕ್ಕೆ ವೈದ್ಯರು ಸೀಗೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಡಾರ್ಟ್ ಆದ ನಂತರವೂ ಕಿಲೋಮೀಟರ್ಗಟ್ಟಲೇ ಸೀಗೆಆನೆ ಓಡಿದೆ. ಸುಮಾರು12.38 ಕ್ಕೆ ಪ್ರಜ್ಞೆತಪ್ಪಿ ಬಿದ್ದಿದೆ. ನಂತರ ಕಾಡಾನೆ ಆರೈಕೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ಅದರ ಪ್ರಜ್ಞೆ ಮರಳಿದ ನಂತರ ಬಂಧಿಸಿ ಸ್ಥಳಾಂತರ ಕಾರ್ಯ ಆರಂಭಿಸಿದರು.
ಅಭಿಮನ್ಯು ನೇತೃತ್ವದಲ್ಲಿ ನಡೆದ ಆಪರೇಷನ್ ನಲ್ಲಿ ಹರ್ಷಾ, ಪ್ರಶಾಂತ, ಕರ್ನಾಟಕ ಭೀಮ, ಮಹೇಂದ್ರ ಧನಂಜಯ, ಅಶ್ವತ್ಥಾಮ ಭಾಗವಹಿಸಿದ್ದರು. ಸೀಗೆ ಆನೆ ಈತನಕ ಇಬ್ಬರನ್ನು ಬಲಿ ಪಡೆದಿದ್ದಲ್ಲದೇ ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು.